ಲೋಕಾಯುಕ್ತರಿಗೆ ಹಗ್ಗ ಕೊಡಲು ಯಾರಿಗೂ ತಲೆಕೆಟ್ಟಿಲ್ಲ!
ಬೆಂಗಳೂರು, ಆಗಸ್ಟ್ 01 : ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ವಿಚಾರ, ಮತ್ತೆ ಚರ್ಚಿತ. ಈ ಸಲ ಹೆಚ್ಚಿನ ಅಧಿಕಾರ ನೀಡೇ ನೀಡುತ್ತೇವೆ ಎಂದಿದ್ದಾರೆ ಗೃಹ ಸಚಿವ ಎಂ.ಪಿ.ಪ್ರಕಾಶ್. ಆದರೆ ಅದು ಅಷ್ಟು ಸುಲಭವಲ್ಲ. ತಾವೇ ಹಗ್ಗ ಕೊಟ್ಟು, ಕೈಕಟ್ಟಿಸಿ ಕೊಳ್ಳಲು ನಮ್ಮ ಜನಪ್ರತಿನಿಧಿಗಳು ದಡ್ಡರಲ್ಲ!
ವಿಧಾನಸಭೆಯಲ್ಲಿ ಕೆ.ಜಿ.ಬೋಪಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಎಂ.ಪಿ.ಪ್ರಕಾಶ್ , ಈ ಅಧಿವೇಶನದಲ್ಲೇ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುತ್ತೇವೆ. ಇಲ್ಲದಿದ್ದರೆ ಸುಗ್ರೀವಾಜ್ಞೆ ಮುಖಾಂತರ ಹೆಚ್ಚಿನ ಅಧಿಕಾರ ನೀಡುತ್ತೇವೆ ಎಂದು ಹೇಳಿದ್ದಾರೆ. ಇದು ದೋಸ್ತಿ ಸರ್ಕಾರದ ಇನ್ನೊಂದು ಜನಪ್ರಿಯ ಹೇಳಿಕೆ ಎಂಬುದು ಜನಸಾಮಾನ್ಯರ ಅನಿಸಿಕೆ.
ಕಳೆದ 3ವರ್ಷಗಳಲ್ಲಿ ಲೋಕಾಯುಕ್ತರು 54ದಾಳಿ ಮುಖಾಂತರ, 53.67 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ರಾಜ್ಯದಲ್ಲಿ ಭ್ರಷ್ಟಚಾರದ ಪ್ರಕರಣಗಳು ಕೇವಲ 54! ಲೋಕಾಯುಕ್ತರು ಇನ್ನಾದರೂ ಸಕ್ರಿಯವಾಗಿ ರಂಗಕ್ಕಳಿಯಬೇಕು. ಇರುವ ಶಕ್ತಿಯನ್ನೇ ಸದುಪಯೋಗ ಪಡಿಸಿಕೊಳ್ಳಬೇಕು. ಐಎಎಸ್ ಅಧಿಕಾರಿಗಳು, ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಸಹಾ ಲೋಕಾಯುಕ್ತ ಕಾಯ್ದೆಯ ವ್ಯಾಪ್ತಿಗೆ ತರುವ ಅಗತ್ಯವಿದೆ ಎಂಬುದು ಜನರ ನಡುವಿನ ಮಾತು.
(ದಟ್ಸ್ ಕನ್ನಡ ವಾರ್ತೆ)