ಕೋಯಮತ್ತೂರು ಸ್ಫೋಟ : ಅಲ್-ಉಮ್ಮಾ ನಾಯಕ ಬಾಷಾ ದೋಷಿ
ಕೋಯಮತ್ತೂರು, ಆಗಸ್ಟ್ 01 : ಅಲ್-ಉಮ್ಮಾ ನಾಯಕ ಎಸ್.ಎ.ಬಾಷಾ ಸೇರಿದಂತೆ 12 ಜನರನ್ನು 1998ರ ಸರಣಿ ಬಾಂಬ್ ಸ್ಫೋಟದ ರೂವಾರಿಗಳೆಂದು ಬುಧವಾರ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
9 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಬಹು ನಿರೀಕ್ಷಿತ ತೀರ್ಪನ್ನು ನೀಡಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಉಮಾಪತಿ ಅವರು, ಬಾಷಾ, ಅಲ್ ಉಮ್ಮಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ ಮತ್ತಿತರ 11 ಜನರನ್ನು ಸ್ಫೋಟದ ಸಂಚಿನಲ್ಲಿ ಭಾಗಿಯಾಗಿರುವುದು ರುಜುವಾತಾಗಿದೆ ಎಂದು ಸಾರಿದರು.
1998ರ ಫೆಬ್ರವರಿ 14ರಂದು ಇಡೀ ನಗರವನ್ನು ತಲ್ಲಣಗೊಳಿಸಿದ ಸರಣಿ ಸ್ಫೋಟಗಳಲ್ಲಿ 58 ಜನ ಹತ್ಯೆಗೀಡಾಗಿ, 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರು ಸಭೆಯನ್ನುದ್ದೇಶಿಸಿ ಮಾತನಾಡುವ ಕೆಲವೇ ಕ್ಷಣಗಳ ಮೊದಲು ಸರಣಿ ಸ್ಫೋಟಗಳು ಜರುಗಿದ್ದವು. ಒಟ್ಟು 19 ಕಡೆಗಳಲ್ಲಿ ಸ್ಫೋಟಗಳು ಸಂಭವಿಸಿದ್ದವು.
ಈ ತೀರ್ಪಿಗೆ ಪ್ರತಿಯಾಗಿ ಪ್ರತಿವಾದಿಗಳ ವಾದವನ್ನು ಕೇಳಿದ ನಂತರ ಆಗಸ್ಟ್ 6ರಿಂದ ಅಪರಾಧಿಗಳ ಶಿಕ್ಷೆಯನ್ನು ಘೋಷಿಸಲಾಗುವುದು.
ಆದರೆ, ಈ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ನಾಯಕ ಅಬ್ದುಲ್ ನಾಸರ್ ಮಧಾನಿ ಅವರನ್ನು ಯಾವುದೇ ಸಾಕ್ಷ್ಯ ಸಿಗದ ಕಾರಣ ಆರೋಪಮುಕ್ತರನ್ನಾಗಿ ಮಾಡಲಾಗಿದೆ. ಯಾವುದೇ ಆರೋಪ ಸಾಬೀತಾಗದಿದ್ದರೂ ಮಧಾನಿಯನ್ನು ತಕ್ಷಣ ಬಿಡುಗಡೆಗೊಳಿಸಲು ನ್ಯಾಯಾಧೀಶರು ನಿರಾಕರಿಸಿದರು.
ಸೇಡಿಗೆ ಸೇಡು ಸಂಚಿಗೆ ಸಂಚು : 1997ರ ನವೆಂಬರ್ 29ರಂದು ಸಂಚಾರಿ ಪೊಲೀಸ್ ಸೆಲ್ವರಾಜ್ ಅವರು ಶಂಕಿತ ಅಲ್ ಉಮ್ಮಾ ತಂಡದಿಂದ ಹತ್ಯೆಗೀಡಾಗಿದ್ದ ಹಿನ್ನೆಲೆಯಲ್ಲಿ ಕೋಮು ಗಲಭೆ ತಲೆದೋರಿತ್ತು. ಈ ಕೋಮುಗಲಭೆಗೆ ಸೇಡೆಂಬಂತೆ ಅಲ್ ಉಮ್ಮಾ ಗುಂಪಿನವರು ಅಡ್ವಾಣಿ ಭಾಷಣಕ್ಕೆ ಮೊದಲು ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಿ 58 ಅಮಾಯಕರ ಹತ್ಯೆಗೆ ಕಾರಣರಾಗಿದ್ದರು.
ಈ ಸ್ಫೋಟಗಳಿಗಾಗಿ 850 ಕೆ.ಜಿ. ಜಿಲ್ಯಾಟಿನ್ ಮತ್ತು ಸುಮಾರು 3 ಸಾವಿರ ಸುಧಾರಿತ ಸ್ಫೋಟಕ ಸಾಧನಗಳನ್ನು ಮೈಸೂರಿನ ಇಂಡಿಯನ್ ಎಕ್ಸ್ಪ್ಲೋಸೀವ್ ಕಾರ್ಪೋರೇಶನ್ನಿನ ಮಾಲಿಕ ರಿಯಾಜ್ ಉರ್ ರೆಹಮಾನ್ ಅವರಿಂದ ತರಿಸಿಕೊಳ್ಳಲಾಗಿತ್ತು.
ಒಟ್ಟು 181 ಆರೋಪಿಗಳಲ್ಲಿ ಏಳು ಜನ ಸ್ಫೋಟದಲ್ಲಿ ಸಾವನ್ನಪ್ಪಿದ್ದರೆ ಐವರು ಪರಾರಿಯಾಗಿದ್ದರು. ಮೊದಮ್ಮದ್ ದಸ್ತಗೀರ್ ಎಂಬಾತ ವಿಚಾರಣೆ ವೇಳೆಯಲ್ಲಿ ಸತ್ತಿದ್ದ. ಸ್ಫೋಟಕಗಳನ್ನು ಒದಗಿಸಿದ್ದ ರಿಯಾಜ್ ಅಪ್ರೂವರ್ ಆಗಿದ್ದ.
(ಯುಎನ್ಐ)