ಮುಂಬೈ ಸ್ಫೋಟ : ಸಂಜಯ್ ದತ್ಗೆ 6 ವರ್ಷ ಜೈಲು ಶಿಕ್ಷೆ
ಮುಂಬೈ, ಜುಲೈ 31 : ಯಾವ ಆರೋಪಿಯೂ ಕ್ಷಮೆಗೆ ಅರ್ಹನಲ್ಲ. ಅವರು ಅತ್ಯಂತ ಅಪಾಯಕಾರಿ ಅಪರಾಧ ಎಸಗಿದ್ದಾರೆ.
ಸಾವಿರಾರು ಬೆಂಬಲಿಗರ ನಿರೀಕ್ಷೆಗಳನ್ನು ಹುಸಿಗೊಳಿಸಿ 1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ಗೆ 6 ವರ್ಷಗಳ ಶಿಕ್ಷೆಯನ್ನು ಘೋಷಿಸಿದ ನಂತರ ಟಾಡಾ ನ್ಯಾಯಾಧೀಶ ಪಿ.ಡಿ.ಖೋಡೆ ಅತ್ಯಂತ ಗಂಭೀರವಾಗಿ ಹೇಳಿದ ಮಾತುಗಳಿವು.
ಅಮಾಯಕತೆ, ಸನ್ನಡತೆ ಸಂಜಯ್ ದತ್ ಅವರನ್ನು ಕಾಪಾಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ದೇಶದ ರಕ್ಷಣೆಯ ಮುಂದೆ ಭಾವುಕತೆಗೆಲ್ಲಿ ಸ್ಥಳ? ಮಗಳ ಯೋಗಕ್ಷೇಮ, ಸಮಾಜಸೇವೆ ಕುರಿತು ಅವರು ಮಾಡಿದ್ದ ಮನವಿಗೆ ನ್ಯಾಯಾಧೀಶರು ಸೊಪ್ಪು ಹಾಕಿಲ್ಲ.
ಅವರೀಗಾಗಲೆ 16 ತಿಂಗಳು ಕಾಲ ವಿಚಾರಣೆ ಸಂದರ್ಭದಲ್ಲಿ ಜೈಲುಶಿಕ್ಷೆ ಅನುಭವಿಸಿದ್ದರಿಂದ ಉಳಿದ 4 ವರ್ಷ 8 ತಿಂಗಳು ಅನುಭವಿಸಬೇಕಾಗುತ್ತದೆ. ಶಿಕ್ಷೆಯ ಅವಧಿ ಮೂರು ವರ್ಷಕ್ಕಿಂತ ಮೇಲಾಗಿದ್ದರಿಂದ ಜಾಮೀನಿಗೆ ಯಾವುದೇ ಅವಕಾಶವಿಲ್ಲ. ನ್ಯಾಯಾಲಯದಿಂದ ನೇರವಾಗಿ ಅವರನ್ನು ಜೈಲಿಗೆ ಕರೆದುಕೊಂಡು ಹೋಗಲಾಗುತ್ತಿದೆ.
ಭಯೋತ್ಪಾದಕ ಹಣೆಪಟ್ಟಿಯಿಂದ ಮುಕ್ತರಾಗಿದ್ದರೂ ಎಕೆ 56 ಗನ್ ಮತ್ತು ಪಿಸ್ತೂಲನ್ನು ಹೊಂದಿದ್ದ ಮತ್ತು ತದನಂತರ ಸಾಕ್ಷಿಯನ್ನು ನಾಶಪಡಿಸಲು ಪ್ರಯತ್ನಿಸಿದ ಆರೋಪಗಳನ್ನು ಸಂಜಯ್ ಎದುರಿಸುತ್ತಿದ್ದರು.
ಶಿಕ್ಷೆ ಘೋಷಣೆ ನಂತರ ಅತ್ಯಂತ ಭಾವುಕರಾಗಿದ್ದ ಸಂಜಯ್ ತಮ್ಮ ಮಗಳು ತ್ರಿಷಲಾ ಜೊತೆ ಮಾತಾಡಲು ಅವಕಾಶ ನೀಡಬೇಕಾಗಿ ಅವರು ಮನವಿ ಮಾಡಿದ್ದಾರೆ.
ಇನ್ನೊಬ್ಬ ಆರೋಪಿ ಯೂಸಫ್ ನುಲಿವಾಲಗೆ 5 ವರ್ಷ ಶಿಕ್ಷೆ ಹಾಗೂ 25,000 ರು ದಂಡ ವಿಧಿಸಲಾಗಿದೆ. ಕರ್ಸಿ ಅಡೆಜೆನಿಯಾ ಗೆ 2 ವರ್ಷ ಶಿಕ್ಷೆ ವಿಧಿಸಲಾಗಿದೆ. ಸನ್ನಡತೆಗಾಗಿ ರುಸಿ ಮುಲ್ಲಾನನ್ನು ಆರೋಪ ಮುಕ್ತಗೊಳಿಸಲಾಗಿದೆ.
ಸಂಜಯ್ ಸನ್ನಡತೆ ಅವರನ್ನು ಶಿಕ್ಷೆಯಿಂದ ಪಾರುಮಾಡಬಲ್ಲದೆ?