ಕಾವೇರಿ ಕರಕುಶಲ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯ!
ಬೆಂಗಳೂರು,ಜುಲೈ 25: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮವು ಆಯ್ದ ಕರಕುಶಲ ವಸ್ತುಗಳ ಮೇಲೆ ಶೇಕಡ 50ರಷ್ಟು ರಿಯಾಯಿತಿ ಘೋಷಿಸಿದೆ. ಬೆಂಗಳೂರಿನ ಕಲಾಪ್ರೇಮಿಗಳಿಗೆ ಇದೊಂದು ಸುವರ್ಣಾವಕಾಶ!
ಶ್ರೀ ರಾಜಲಕ್ಷ್ಮಿ ಕಲ್ಯಾಣ ಮಂದಿರ, ಸಂಖ್ಯೆ626, 46ನೇ ಅಡ್ಡರಸ್ತೆ, 8ನೇ ಬ್ಲಾಕ್, ಜಯನಗರ ಬೆಂಗಳೂರು. ಇಲ್ಲಿ ಜುಲೈ 25ರಿಂದ ಆಗಸ್ಟ್ 3 ರವರೆಗೆ ವಿಶೇಷ ರಿಯಾಯಿತಿ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.
ಕಾವೇರಿ ಎಂಬ ಬ್ರಾಂಡ್ ಹೆಸರಿನಿಂದ ಜಗತ್ಪ್ರಸಿದ್ದವಾಗಿರುವ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತವು, ಕರಕುಶಲ ವಸ್ತುಗಳ ಲೋಕದಲ್ಲಿ ತನ್ನದೇ ಆದ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಕರ್ನಾಟಕ ರಾಜ್ಯದ 13 ಸ್ಥಳಗಳಲ್ಲಿ ಕಲಾ ಸಂಕೀರ್ಣಗಳನ್ನು ಸ್ಥಾಪನೆ ಮಾಡಿದೆ.
ರಾಜ್ಯದ ಕರಕುಶಲತೆಯನ್ನು ಉಳಿಸುವ, ಬೆಳೆಸುವ ಮತ್ತು ಕರಕುಶಲ ವಸ್ತುಗಳಿಗೆ ಮಾರಾಟ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 1964ರಲ್ಲಿ ಸ್ಥಾಪನೆಗೊಂಡ ನಿಗಮವು ರಾಜ್ಯದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವುದಕ್ಕಾಗಿ ರಾಷ್ಟ್ರಾದ್ಯಂತ 12 ಕಾವೇರಿ ಕರಕುಶಲ ಮಳಿಗೆಗಳನ್ನು ಸ್ಥಾಪನೆ ಮಾಡಿದೆ.
ಈ ಮಳಿಗೆಗಳು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಚೆನ್ನೈ , ಸಿಕಂದರಾಬಾದ್ ಮತ್ತು ನವದೆಹಲಿ ನಗರಗಳಲ್ಲಿದೆ. ನಿಗಮವು ಕಳೆದ 4 ವರ್ಷಗಳಿಂದ ಸತತವಾಗಿ ಲಾಭಗಳಿಸುತ್ತಿರುವುದು ಸುದ್ದಿ.
ಈ ಮಾರಾಟದ ಅವಧಿಯು ಬೆಳಿಗ್ಗೆ 10ರಿಂದ ಸಂಜೆ 8 ಗಂಟೆಯವರೆಗೆ. ಭಾನುವಾರವೂ ವ್ಯಾಪಾರ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)