ಸೆಕ್ಸ್ ಸೀಡಿ ಕರ್ಮಕಾಂಡ :ಟೀವಿ 9 ಸಿಬ್ಬಂದಿ ಮೇಲೆ ಹಲ್ಲೆ
ಮಂಗಳೂರು,ಜುಲೈ 23: ಮಂಗಳೂರಿನ ಸೆಕ್ಸ್ ರಾಕೆಟ್ ಬಗ್ಗೆ ವರದಿ ಮಾಡಿದ ಟಿ.ವಿ.9 ಚಾನೆಲ್ ನ ನಗರದ ಕಚೇರಿ ಮೇಲೆ ಕಿಡಿಗೇಡಿಗಳು ದಾಳಿ ಮಾಡಿ, ಪೀಠೋಪಕರಣ, ಕ್ಯಾಮೆರಾ ಮತ್ತು ಗಣಕಯಂತ್ರಗಳನ್ನು ಧ್ವಂಸ ಮಾಡಿದ ಘಟನೆ ವರದಿಯಾಗಿದೆ. ಈ ಘಟನೆಯನ್ನು ನಾಡಿನ ಗಣ್ಯರು ಒಗ್ಗೊರಲಿನಿಂದ ಸೋಮವಾರ ಖಂಡಿಸಿದ್ದಾರೆ.
ಭಾನುವಾರ ರಾತ್ರಿ ಕಚೇರಿಗೆ ನುಗ್ಗಿದ ಗುಂಪೊಂದು, ಮನಬಂದಂತೆ ಬೈಗುಳದ ಸುರಿಮಳೆ ಸುರಿಸಿ, ಕಚೇರಿಯಲ್ಲಿನ ವಸ್ತುಗಳನ್ನು ಧ್ವಂಸ ಮಾಡಿದೆ. ಟಿ.ವಿ.9 ವರದಿಗಾರ ರಾಜೇಶ್ ಶೆಟ್ಟಿ ಮೇಲೆ ಹಲ್ಲೆ ಸಹಾ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮೀನುಗಾರಿಕೆ ಸಚಿವ ಮತ್ತು ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಬಿ.ನಾಗರಾಜ ಶೆಟ್ಟಿ ಕಚೇರಿಗೆ ಭೇಟಿ ನೀಡಿ, ಕೃತ್ಯವನ್ನು ಖಂಡಿಸಿದ್ದಾರೆ. ಮಂಗಳೂರು ಸಂಪಾದಕರ ಕ್ಲಬ್ ಮತ್ತು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ಮಾಧ್ಯಮ ಸ್ವಾತಂತ್ರ್ಯ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ತಪ್ಪಿತಸ್ಥರ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದೆ.
ಟಿ.ವಿ.9 ಮೇಲಿನ ದಾಳಿ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ, ಪ್ರತಿಭಟನಾ ಮೆರವಣಿಗೆ ನಡೆಸಿದೆ.
ಘಟನೆಯ ಹಿನ್ನೆಲೆ : ವಾರೆಂಟ್ ಎನ್ನುವ ಕಾರ್ಯಕ್ರಮದಲ್ಲಿ,ಮಂಗಳೂರಿನಲ್ಲಿ ಮುಂಗಾರು ಮಳೆಎಂಬ ಶೀರ್ಷಿಕೆಯಡಿಯಲ್ಲಿ ಶನಿವಾರ ರಾತ್ರಿ ಟಿ.ವಿ.9, ನೀಲಿ ಚಿತ್ರ ತಯಾರಿಕೆಯ ದಂಧೆಯನ್ನು ವಿವರಿಸಿತ್ತು.
ಮುಂಗಾರು ಮಳೆ ಎನ್ನುವ ಹೆಸರಲ್ಲಿ ಹೊರಬಂದಿರುವ ಐದೂವರೆ ನಿಮಷಗಳ ಅಶ್ಲೀಲ ಸಿ.ಡಿ. ಬಗ್ಗೆ, ಅದರಲ್ಲಿ ಪಾಲ್ಗೊಂಡ ಹುಡುಗಿ ಬಗ್ಗೆ ಮತ್ತು ದಂಧೆಯ ಸ್ವರೂಪವನ್ನು ಟಿ.ವಿ.9 ಬಿಚ್ಚಿಟ್ಟಿತ್ತು. ಈ ವರದಿಯಿಂದ ಸಿಟ್ಟಿಗೆದ್ದ ಗುಂಪೊಂದು, ಟಿ.ವಿ.9 ಕಚೇರಿಗೆ ನುಗ್ಗಿ ದಾಂಧಲೆ ಮಾಡಿದೆ. ಸಿಬ್ಬಂದಿಯನ್ನು ಬೆದರಿಸಿದೆ.
ಮಂಗಳೂರು, ಭಟ್ಕಳ, ಕಾರವಾರ, ಉಡುಪಿ ಮತ್ತಿತರ ಪ್ರದೇಶಗಳಲ್ಲಿ ನೀಲಿ ಚಿತ್ರ ತಯಾರಿಕೆಯ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಮಂಗಳೂರಿನ ಕೆಲವು ಲಾಡ್ಜ್ ಗಳಲ್ಲಿ ನೀಲಿ ಸಿನಿಮಾಗಳ ರೀಲು ಸುತ್ತಲಾಗುತ್ತದೆ ಎಂಬ ದೂರುಗಳು ಮೊದಲಿನಿಂದಲೂ ಇವೆ.
(ದಟ್ಸ್ ಕನ್ನಡ ವಾರ್ತೆ)