ಆನು ದೇವಾ... : ತಾತ್ಕಾಲಿಕವಾಗಿ ಹಿಂಪಡೆದ ಬಂಜಗೆರೆ
ಬೆಂಗಳೂರು , ಜುಲೈ 23 : ವ್ಯಾಪಕ ಟೀಕೆಗೊಳಗಾಗಿ, ರಾಜ್ಯಾದ್ಯಂತ ಪ್ರತಿಭಟನೆಗೆ ಗುರಿಯಾಗಿ ರುವ ಆನು ದೇವಾ ಹೊರಗಣವನು... ಕೃತಿಯನ್ನು ಲೇಖಕ ಬಂಜಗೆರೆ ಜಯಪ್ರಕಾಶ್ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಾಭಿಮಾನಿಗಳ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಯತ್ನಿಸುತ್ತಿವೆ. ಅವುಗಳು ಸನ್ನಿವೇಶದ ದುರ್ಲಾಭ ಪಡೆಯಬಾರದು ಎಂಬ ಕಾರಣಕ್ಕೆ ಕೃತಿಯನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇನೆ. ಆದರೆ ಕೃತಿಯಲ್ಲಿ ತಳೆದಿರುವ ನಿಲುಗೆ ನಾನು ಈಗಲೂ ಬದ್ಧಎಂದು ಸಮರ್ಥಿಸಿಕೊಂಡರು.
ವಿವಾದಿತ ಅಂಶಗಳ ಬಗ್ಗೆ ವಿದ್ವಾಂಸರ ಜೊತೆ ಚರ್ಚಿಸಿ, ಅಭಿಪ್ರಾಯ ಮಂಡನೆಯಲ್ಲಿ ಏನಾದರೂ ಪರಿಷ್ಕರಣೆ ಅಗತ್ಯವಿದೆಯೇ ಎಂದು ಪರಿಶೀಲಿಸುತ್ತೇನೆ. ಇನ್ನು ಸ್ವಲ್ಪ ಸಮಯದಲ್ಲೇ ಕೃತಿಯನ್ನು ಮತ್ತೆ ಹೊರತರುತ್ತೇನೆ ಎಂದು ಸ್ಪಷ್ಟಪಡಿಸಿದರು.
12ನೇ ಶತಮಾನದ ಸಮಾಜ ಸುಧಾರಕ, ವಚನಕಾರ ಬಸವಣ್ಣನವರು ಮಾದಿಗ ಜಾತಿಯವರು. ಅವರು ಬ್ರಾಹ್ಮಣರಾಗಿ ಹುಟ್ಟಿದವರಲ್ಲ ಎಂದು ಬಂಜಗೆರೆ ಜಯಪ್ರಕಾಶ್ ಕೃತಿಯಲ್ಲಿ ಸಮರ್ಥಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸರ್ಕಾರದ ಸ್ಪಷ್ಟನೆ :ಆನುದೇವಾ ...ಕೃತಿ ಮುಟ್ಟುಗೋಲು ಕುರಿತು ಸೋಮವಾರ ನಿರ್ಧಾರ ಪ್ರಕಟಿಸುವ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)