ಪ್ರೀತಿ ಏಕೆ ಭೂಮಿ ಮೇಲಿದೆ ?ಚಿತ್ರಕ್ಕೆ ರೆಬೆಲ್ ಸ್ಟಾರ್ ಎಂಟ್ರಿ
ರಾಜಕೀಯ ರಂಗದಿಂದ ಬೇಸತ್ತಂತೆ ತೋರುತ್ತಿರುವ ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಷ್ ಈಗ ಚಿತ್ರರಂಗದಲ್ಲಿ ಮುಖ ಮಾಡಿದ್ದಾರೆ.
ಫೆಬ್ರವರಿಯಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ನೀಡಿದ ರಾಜಿನಾಮೆ ಅಂಗೀಕಾರವಾಗದೆ ಇದ್ದರೂ, ಸಚಿವ ಸ್ಥಾನದ ಬಗ್ಗೆ ಆಸಕ್ತಿ ಕಳೆದುಕೊಂಡಿರುವ ಅಂಬರೀಷ್, ಮಂಡ್ಯದ ಹುಡ್ಗ ನಟ, ನಿರ್ದೇಶಕ ಪ್ರೇಮ್ ಅವರ" ಪ್ರೀತಿ ಏಕೆ ಭೂಮಿ ಮೇಲಿದೆ" ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂಬರೀಷ್ ರವರ ಪಾತ್ರದ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿಯಿಲ್ಲ.
ಇದಲ್ಲದೆ ನವನಾಯಕ ದೀಪಕ್ ಅಭಿನಯದ "ಚೆನ್ನ" ಚಿತ್ರದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ತರುವ ಪ್ರಮುಖ ಗೀತೆಯೊಂದರಲ್ಲಿ ಅಂಬರೀಷ್ ಅಭಿನಯಿಸುತ್ತಿರುವುದಾಗಿ ತಿಳಿದುಬಂದಿದೆ.
** *
ವಿದೇಶಕ್ಕೆ ಹೋಗ್ತಿರಾ? ಜಂಬೋ ಪಾಸ್ ಪೋರ್ಟ್ ಪಡೆಯಿರಿ
ಪದೇ ಪದೇ ವಿದೇಶ ಪ್ರಯಾಣ ಮಾಡುವವರ ಅನುಕೂಲಕ್ಕೆ ವಿದೇಶಾಂಗ ಇಲಾಖೆ ಹೊಸ ಸೌಲಭ್ಯವನ್ನು ನೀಡುತ್ತಿದೆ. 64 ಪುಟಗಳ ಜಂಬೋ ಮೆಷಿನ್ ರೀಡೆಬಲ್ ಪಾಸ್ ಪೋರ್ಟ್ ಕೈಪಿಡಿಯನ್ನು ಹೊರತಂದಿದೆ.
ಪಾಸ್ ಪೋರ್ಟ್ ನಲ್ಲಿನ ಪ್ರತಿ ಸಾಲುಗಳನ್ನು ಯಂತ್ರವೇ ಮುದ್ರಿಸಿ, ಗ್ರಹಿಸುವುದರಿಂದ ಕೈಬರಹದಿಂದಾಗುವ ಲೋಪ ದೋಷಗಳನ್ನು ಹಾಗೂ ನಕಲಿ ಪಾಸ್ ಪೋರ್ಟ್ ಹಾವಳಿಯನ್ನು ತಡೆಗಟ್ಟಬಹುದಾಗಿದೆ.
ವಿದೇಶಾಂಗ ಖಾತೆ ರಾಜ್ಯ ಸಚಿವ ಇ .ಅಹಮದ್ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಇನ್ಫೋಸಿಸ್ ನ ನಾರಾಯಣಮೂರ್ತಿಯವರಿಗೆ ಕೈಪಿಡಿಯ ಪ್ರಥಮ ಪ್ರತಿಯನ್ನು ನೀಡಿದರು.
ಮಂಗಳೂರಿನಲ್ಲಿ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯನ್ನು ಪ್ರಾರಂಭಿಸುವ ಬಗ್ಗೆ ಸಚಿವರು ಭರವಸೆ ನೀಡಿದರು.