ನಗರದಲ್ಲಿ ಮುಂಗಾರು ಮಳೆಯ ಆರ್ಭಟ 3 ಜನ ಸಾವು
ಬೆಂಗಳೂರು, ಜುಲೈ 22: ನಗರದಲ್ಲಿ ಶನಿವಾರ(ಜುಲೈ 21) ರಾತ್ರಿ ಸುರಿದ ಧಾರಾಕಾರ ಮಳೆಗೆ ಗೋಡೆ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಗಿರಿನಗರದ ವರ್ತುಲ ರಸ್ತೆಯಲ್ಲಿನ ಪಿಇಎಸ್ ಕಾಲೇಜಿನ ಸಮೀಪ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ಸುಬ್ಬಯ್ಯ (21), ಶಿವ(22) ಮತ್ತು ಪ್ರಕಾಶ(19) ಎಂದು ಗುರುತಿಸಲಾಗಿದ್ದು, ಎಲ್ಲರೂ ಆಂಧ್ರಪ್ರದೇಶದ ಕಡೆಯವರಾಗಿದ್ದಾರೆ.
ಮಳೆಯ ನರ್ತನ , ಬಡಾವಣೆಗಳಲ್ಲಿ ಬವಣೆ:
ಹಲವು ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು ನಾಗರೀಕರು ಕಂಗೆಟ್ಟಿದ್ದಾರೆ. ಚಾಮರಾಜಪೇಟೆ ಸಮೀರ್ ಪಾಳ್ಯ ರಾಮ ದೇವಾಲಯದ ಬಳಿ ದೊಡ್ಡ ಚರಂಡಿಯ ಗೋಡೆ ಕುಸಿದು, ಸಮೀಪದ ಮನೆಗಳಿಗೆ ನೀರು ನುಗ್ಗಿದೆ.
ಕೋರಮಂಗಲದ ಕೇಂದ್ರಿಯ ಸದನದ ಸುತ್ತ ರಸ್ತೆಗಳಲ್ಲಿ ನೀರು ನಿಂತದ್ದರಿಂದ ಹಲವು ಗಂಟೆಗಳ ಕಾಲ ಸುತ್ತಮುತ್ತಲಿನ ನಿವಾಸಿಗಳು ಪರದಾಡಿದ್ದಾರೆ. ನ್ಯಾಷನಲ್ ಗೇಮ್ ವಿಲೇಜ್ ಬಳಿ ದೊಡ್ಡ ಮೋರಿಯಿಂದ ನೀರು ಹರಿದು ಸಮೀಪದಲ್ಲಿನ ಕೊಳಚೆ ಪ್ರದೇಶದ ನಿವಾಸಿಗಳ ಮನೆಗಳ ನಿವಾಸಿಗಳಿಗೆ ತೊಂದರೆಯಾಗಿದೆ.
ಈಜಿಪುರದ ಬಂಡೆಪ್ಪ ಪಾಳ್ಯ ಬಡಾವಣೆಯಲ್ಲಿ, ಇಂದಿರಾನಗರ 17 ನೇ ಬಿ ಅಡ್ಡರಸ್ತೆ, ಮಲ್ಲೇಶ್ವರ 18 ನೇ ಅಡ್ಡರಸ್ತೆ, ಕಲಾಸಿಪಾಳ್ಯ, ಮಡಿವಾಳ ಸಿಲ್ಕ್ ಬೋರ್ಡ್ ವೃತ್ತದ ಬಳಿ ನೀರು ನಿಂತದ್ದರಿಂದ ಕಚೇರಿ ಮುಗಿಸಿ ಮನೆಗೆ ತೆರಳುವವರಿಗೆ ತೊಂದರೆಯಾಗಿದೆ.
ಶನಿವಾರದ ಭಾರೀ ಮಳೆ ಹಾಗೂ ರಭಸವಾದ ಗಾಳಿಗೆ ಸಿಕ್ಕಿ ಬಿಟಿಎಂ ಲೇಔಟ್, ಗಾಂಧಿಬಜಾರ್, ಇಂದಿರಾನಗರ, ಕೋರಮಂಗಲ ಮುಂತಾದೆಡೆ ಮರಗಳು ಬಿದ್ದಿವೆ.
ಬಿಬಿಎಂಪಿ ಪರಿಹಾರ:
ದೊಡ್ಡ ಮೋರಿಗಳಿಂದ ನೀರು ಹರಿಯದಂತೆ ಮರಳಿನ ಚೀಲಗಳನ್ನು ಹಾಕಲಾಗಿದೆ. ಆದರೆ, ಇದು ತಾತ್ಕಾಲಿಕ ಕ್ರಮ ಮಾತ್ರ. ಕಾಮಾಕ್ಯ ಚಿತ್ರಮಂದಿರ ಕೆನರಾಬ್ಯಾಂಕ್ ಕಾಲೋನಿ, ಹನುಮಗಿರಿ, ಸಮೀರ್ ಪಾಳ್ಯ ಮುಂತಾದ ಪ್ರದೇಶಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಕೊಟ್ಟು ಅಕ್ರಮವಾಗಿ ಮೋರಿ ಒತ್ತುವರಿ ಮಾಡಿಕೊಂಡ ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದಾರೆ
.ಆದರೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ, ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿ, ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತ ಡಾ. ಸುಬ್ರಮಣ್ಯ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)