ರಾಷ್ಟ್ರಪತಿ ಚುನಾವಣೆ : ರಾಜ್ಯ ಶಾಸಕರಿಂದ ಮತ ಚಲಾವಣೆ
ಬೆಂಗಳೂರು, ಜುಲೈ 19 : 224 ಶಾಸಕರನ್ನು ಹೊಂದಿರುವ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ 165 ಸದಸ್ಯರು ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದ್ದಾರೆ.
ಬಿಗಿ ಭದ್ರತೆಯಡಿ ಬೆಳಗ್ಗೆ ಸರಿಯಾಗಿ 10 ಗಂಟೆಗೆ ಪ್ರಾರಂಭವಾದ ಮತಚಲಾವಣೆ, ಸಾಯಂಕಾಲ 5 ಗಂಟೆಗೆ ಕೊನೆಗೊಂಡಿತು.
ವಿಧಾನಸಭಾ ಸದ್ಯಸ್ಯರಲ್ಲದೆ ರಾಜ್ಯದ ಮೂವರು ಸಂಸದರಾದ ಕಾಂಗ್ರೆಸ್ನ ಅಂಬರೀಷ್, ಬಿಜೆಪಿಯ ಮನೋರಮಾ ಮಧ್ವರಾಜ್ ಮತ್ತು ಮಲ್ಲಿಕಾರ್ಜುನಯ್ಯ ವಿಧಾನಸೌಧದಲ್ಲಿ ಮತ ಹಾಕಿದರು.
65 ಕಾಂಗ್ರೆಸ್ ಶಾಸಕರು ಸೇರಿದಂತೆ ಪ್ರತಿಭಾ ಪಾಟೀಲ್ರನ್ನು ಬೆಂಬಲಿಸಿ 85 ಸದಸ್ಯರು ಮತ ಚಲಾಯಿಸಿದರೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ನಾಯಕ ಎಸ್.ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಬಿಜೆಪಿಯ 77 ಶಾಸಕರು ಸೇರಿದಂತೆ ಒಟ್ಟು 80 ಸದಸ್ಯರು ಶೇಖಾವತ್ರಿಗೆ ಮತ ನೀಡಿದ್ದಾಗಿ ಬಿಜೆಪಿಯ ಶಾಸಕ ಆರಗ ಜ್ಞಾನೇಂದ್ರ ವಿವರಿಸಿದರು.
ಯಾರಿಗೂ ಮತ ಹಾಕದ ತಟಸ್ಥ ನೀತಿಯನ್ನು ತಳೆದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ನ 45 ಸದಸ್ಯರು ಮತ ಚಲಾವಣೆ ಮಾಡಲಿಲ್ಲ.
ಆದರೆ, ಜೆಡಿಎಸ್ನ ಟಿಕೆಟ್ನಿಂದ ಆಯ್ಕೆಯಾಗಿರುವ ವಿಧಾನಸಭಾಧ್ಯಕ್ಷ ಕೃಷ್ಣ ಕೊನೆ ಗಳಿಗೆಯಲ್ಲಿ ಮತ ಚಲಾಯಿಸಿ ಹುಬ್ಬೇರಿಸುವಂತೆ ಮಾಡಿದರು. ಬಿಜೆಪಿಯ ಶಾಸಕರಾದ ಬಿ.ಸಿ.ಮೋಹನ್, ಸುನಿತಾ ವೀರಪ್ಪ ಗೌಡ ಮತ್ತು ಬೇಲೂರು ಗೋಪಾಲಕೃಷ್ಣ ಮತ ಚಲಾಯಿಸಲಿಲ್ಲ.
ಸುರೇಂದ್ರ ಮೋಹನ್ ಬಣದ ಜೆಡಿಎಸ್ದೊಡನೆ ಗುರುತಿಸಿಕೊಂಡಿರುವ ಪಿ.ಜಿ.ಆರ್.ಸಿಂಧ್ಯಾ ಅವರು ಮಹಿಳಾ ಅಭ್ಯರ್ಥಿಯನ್ನು ಬೆಂಬಲಿಸಿ ಮತ ಚಲಾಯಿಸಿದ್ದಾಗಿ ಹೇಳಿದರು.
(ಯುಎನ್ಐ)