ಆತ್ಮಹತ್ಯೆ ಯತ್ನ: ತೀವ್ರ ನಿಗಾ ಘಟಕದಲ್ಲಿ ನರ್ಸ್ ಜಯಲಕ್ಷ್ಮಿ!
ಬೆಂಗಳೂರು, ಜುಲೈ 19 : ಬಿಜೆಪಿ ಶಾಸಕ ರೇಣುಕಾಚಾರ್ಯರ ಜೊತೆಗಿನ ಚುಂಬನದ ಛಾಯಾಚಿತ್ರಗಳನ್ನು ಪತ್ರಕರ್ತರಿಗೆ ನೀಡಿ ಸುದ್ದಿ ಮಾಡಿದ್ದ ನರ್ಸ್ ಜಯಲಕ್ಷ್ಮಿ ಈಗ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಗುರುವಾರ ಸಂಜೆ ವೈದ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬುಧವಾರ ರಾತ್ರಿ 12ರಿಂದ 1ಗಂಟೆ ಸುಮಾರಿನಲ್ಲಿ ನಿದ್ರೆ ಮಾತ್ರೆ ನುಂಗಿ ಜಯಲಕ್ಷ್ಮಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.
ಆತ್ಮಹತ್ಯೆ ಯತ್ನಕ್ಕೆ ಮುನ್ನ, ಖಾಸಗಿ ಟೀವಿ ಚಾನೆಲ್ಗೆ ಆತ್ಮಹತ್ಯೆ ಸುದ್ದಿಯನ್ನು ತಿಳಿಸಿದ್ದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ನನಗೆ ವ್ಯವಸ್ಥೆಯಲ್ಲಿ ನ್ಯಾಯ ಸಿಗುತ್ತಿಲ್ಲ. ಇದರಿಂದ ಬೇಸತ್ತು ಸಾವಿಗೆ ಶರಣಾಗುತ್ತಿದ್ದೇನೆ. ನನಗೆ ಸಹಕಾರ ನೀಡಿದ ಮಾಧ್ಯಮಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಜಯಲಕ್ಷ್ಮಿ ದೂರವಾಣಿಯಲ್ಲಿ ಹೇಳಿದ್ದರು ಎನ್ನಲಾಗಿದೆ.
ಈ ಹಿಂದೆ ಆತ್ಮಹತ್ಯೆಗೆ ಒಂದು ಸಲ ಜಯಲಕ್ಷ್ಮಿ ಪ್ರಯತ್ನಿಸಿದ್ದರು. ತಮ್ಮನ್ನು ಮದುವೆಯಾಗುವಂತೆ ಬಿಜೆಪಿ ಶಾಸಕ ರೇಣುಕಾಚಾರ್ಯ ಪೀಡಿಸುತ್ತಿದ್ದಾನೆ. ಅವರು ನನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂಬುದು ಜಯಲಕ್ಷ್ಮಿ ದೂರು.
(ದಟ್ಸ್ ಕನ್ನಡ ವಾರ್ತೆ)