ಮಂಗಳೂರು ಬಂದರಿನಲ್ಲಿ ತಪ್ಪಿದ ಮತ್ತೊಂದು ದುರಂತ
ಮಂಗಳೂರು, ಜುಲೈ 16 : ಹಡಗಿನ ಕ್ಯಾಪ್ಟನ್ ತೋರಿದ ಸಮಯಸ್ಫೂರ್ತಿಯಿಂದಾಗಿ ಮಂಗಳೂರು ಬಂದರಿನಲ್ಲಿ ಮತ್ತೊಂದು ದುರಂತ ತಪ್ಪಿದೆ.
ಕಳೆದ ತಿಂಗಳು ತಣ್ಣೀರಬಾವಿಯಲ್ಲಿ ಎಮ್.ವಿ.ಡೆನ್ಡೆನ್ ಹಡಗು ಮುಳುಗಿದ್ದು ಇನ್ನೂ ಹಸಿರಾಗಿರುವಾಗಲೇ ಮಂಗಳೂರು ಬಂದರಿನಲ್ಲಿ ಕರಾಚಿಯ ಸರಕು ಸಾಗಾಣೆ ಹಡಗು ಮಕರನ್ ತೊಂದರೆಗೆ ಸಿಲುಕಿ ಮುಳುಗುವ ಅಪಾಯದಲ್ಲಿತ್ತು.
ಕಬ್ಬಿಣದ ಅದಿರನ್ನು ಭಾನುವಾರ ತುಂಬಿಕೊಂಡು ನ್ಯೂ ಮಂಗಳೂರು ಪೋರ್ಟ್ನಿಂದ ಹೊರಟ ಮಕರನ್ನಲ್ಲಿ ಹಡಗು ತಿರುಗಿಸುವಲ್ಲಿ ತೊಂದರೆ ಕಂಡುಬಂದಿದೆ. ತೊಂದರೆಯ ವಾಸನೆ ಸಿಕ್ಕ ಕೂಡಲೆ ಹಡಗಿನ ಕ್ಯಾಪ್ಟನ್ ಮಂಗಳೂರು ಪೋರ್ಟ್ನ ಸಂರಕ್ಷಣಾಧಿಕಾರಿ ಕೆ.ವಿ.ವಾಸ್ವಾನಿ ಅವರನ್ನು ಸಂಪರ್ಕಿಸಿದ್ದಾರೆ.
ಬಂದರಿನಿಂದ ಜಾಸ್ತಿ ದೂರ ಕ್ರಮಿಸದಿದ್ದರಿಂದ ಹಡಗನ್ನು ವಾಪಸು ಕರೆಸಲಾಗಿದ್ದು, ದುರುಸ್ತಿಯ ಕಾರ್ಯ ನಡೆಯುತ್ತಿದೆ.
ಏತನ್ಮಧ್ಯೆ, ತಣ್ಣೀರಬಾವಿಯಲ್ಲಿ ಮುಳುಗಿದ ಡೆನ್ಡೆನ್ ಹಡಗನ್ನು ಮೇಲಕ್ಕೆತ್ತಲು ಪ್ರಾಥಮಿಕ ಸಿದ್ಧತೆಗಳು ನಡೆಯುತ್ತಿವೆ. ಮುಳುಗುವ ಸಾಧನ, ಬೃಹತ್ ಪಂಪುಗಳು, ಪೈಪ್ಲೈನ್ಗಳು, ಬ್ಯಾಟರಿ, ಜೆನರೇಟರ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ತರಿಸಲಾಗಿದೆ.
(ಯುಎನ್ಐ)