ಕೊಡಗಿಗಾಗಿ ಜನಪ್ರತಿನಿಧಿಗಳ ವಿಧಾನಸೌಧ ಚಲೋ ಬೆದರಿಕೆ
ಬೆಂಗಳೂರು, ಜುಲೈ 16 : ಸಾಗುವಳಿ ಭೂಮಿಯ ಮಾಲಿಕತ್ವವನ್ನು ನಿರಾಕರಿಸುವ ಎರಡು ಸುತ್ತೋಲೆಯನ್ನು ಹಿಂಪಡೆಯದಿದ್ದರೆ ವಿಧಾನಸೌಧ ಚಲೋ ಆಂದೋಳನವನ್ನು ಪ್ರಾರಂಭಿಸಬೇಕಾಗುತ್ತದೆ ಎಂದು ಕೊಡಗು ಜಿಲ್ಲಾ ಪ್ರತಿನಿಧಿಗಳು ಪಕ್ಷಬೇಧ ಮರೆತು ಒಕ್ಕೊರಲಿನ ಕೂಗು ಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಂದಾಯ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಈ ಕುರಿತಾಗಿ ಹಲವಾರು ಬಾರಿ ಮನವರಿಕೆ ಮಾಡಿಕೊಡಲಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಸೊಪ್ಪು ಹಾಕುತ್ತಿಲ್ಲ. ಚಳವಳಿಗೆ ಇಳಿಯದೆ ನಮಗೆ ಬೇರೆ ದಾರಿಯಿಲ್ಲ ಎಂದು ಎಂ.ಸಿ.ನಾಣಯ್ಯ ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಉಳುತ್ತಿರುವವರಿಗೆ ಭೂಮಿ ಸೇರಿದ್ದಲ್ಲ, ಕೊಡಗು ಜಿಲ್ಲೆಯ ಎಲ್ಲ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಸೆಪ್ಟೆಂಬರ್ 5 2004ರಂದು ಮೊದಲ ಸುತ್ತೋಲೆ ಹೊರಡಿಸಿದಾಗಲೇ ಕೊಡಗಿನ ಜನರಿಗೆ ಮೊದಲ ಪೆಟ್ಟು ಬಿದ್ದಿತ್ತು. ಅಕ್ಟೋಬರ್ 31, 2006ರಲ್ಲಿ ಭೂಮಾಲಿಕರ ಮತ್ತು ಕಾಫಿ ಬೆಳೆಗಾರರ ಹಕ್ಕುಗಳನ್ನು ಎರಡನೇ ಸುತ್ತೋಲೆಯ ಮುಖಾಂತರ ಕಿತ್ತುಕೊಳ್ಳಲಾಯಿತು ಎಂದು ಅವರು ಕಿಡಿ ಕಾರಿದರು.
ಸರ್ಕಾರಕ್ಕೆ ಕೊಡಗಿನ ನೀರು ಮತ್ತು ಕಂದಾಯ ಬೇಕು ಆದರೆ ಅಲ್ಲಿಯ ಜನರ ನೆಮ್ಮದಿ ಬೇಕಿಲ್ಲ. ಬೇರೆ ರಾಜ್ಯ ಬೇಕೆನ್ನುವ ಕೊಡಗಿನ ಜನರ ಕೂಗಿಗೆ ಸರ್ಕಾರವೇ ನೀರೆರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುತ್ತೋಲೆಗಳನ್ನು ಹಿಂಪಡೆಯಲು ನಿರಾಕರಿಸುತ್ತಿರುವ ಪ್ರಧಾನ ಕಾರ್ಯದರ್ಶಿ ಜಮಾದಾರ್ರನ್ನು ಕೂಡಲೆ ಅಮಾನತ್ತು ಮಾಡಬೇಕು ಎಂದು ನಾಣಯ್ಯ ಆಗ್ರಹಿಸಿದರು.
ವಿರೋಧ ಪಕ್ಷದ ಮಾಜಿ ನಾಯಕ ಎ.ಕೆ.ಸುಬ್ಬಯ್ಯ ಅವರು, ಪರಿಸರವಾದಿಗಳ ಏಜೆಂಟ್ನಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ, ಇಡೀ ಕೊಡಗನ್ನು ಅರಣ್ಯವನ್ನಾಗಿ ಪರಿವರ್ತಿಸಿ ವಿದೇಶಿಗಳಿಂದ ಹಣ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಪರಿಸರವಾದಿ ಉಲ್ಲಾಸ್ ಕಾರಂತ್ ಮತ್ತು ಅವರ ತಂಡ ಈ ಎಲ್ಲ ಅಪಸವ್ಯಗಳ ಹಿಂದಿದೆ ಎಂದು ಅವರು ನೇರವಾಗಿ ಆರೋಪಿಸಿದರು.
(ಯುಎನ್ಐ)