ನಂದಗುಡಿ :ಕುಮಾರಸ್ವಾಮಿ ಸರ್ಕಾರದ ವಿರುದ್ಧ ದೂರು
ಬೆಂಗಳೂರು, ಜುಲೈ 14 : ನಂದಗುಡಿ ವಿಶೇಷ ಆರ್ಥಿಕ ವಲಯ(ಎಸ್ಇಝಡ್) ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ, ಕೇಂದ್ರಕ್ಕೆ ದೂರು ದಾಖಲಿಸಲು ಕಾಂಗ್ರೆಸ್ ಶನಿವಾರ ಸಜ್ಜಾಗಿದೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪಾಲಿಸದೇ, ರೈತರ ಜಮೀನು ಕಸಿಯಲು ಹುನ್ನಾರ ನಡೆಸಿದೆ ಎಂದರು.
ಎಸ್ಇಝಡ್ ಅಥವಾ ಇನ್ಯಾವುದೇ ಅಭಿವೃದ್ಧಿ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ನಂದಗುಡಿ ಎಸ್ಇಝಡ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನೀತಿ ತಪ್ಪು. ಕಡಿಮೆ ಬೆಲೆಗೆ ರೈತರ ಜಮೀನು ಖರೀದಿಸಿ, ರೈತರನ್ನು ವಂಚಿಸಬಾರದು ಎಂದು ಖರ್ಗೆ ಒತ್ತಾಯಿಸಿದರು.
ಯೋಜನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆಗಳ ಅರಿಯಲು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸತ್ಯಶೋಧಕ ಸಮಿತಿ ರಚಿಸಲಾಗಿದೆ. ಸಮಿತಿ ನಮಗೆ ಸದ್ಯದಲ್ಲೇ ವರದಿ ನೀಡಲಿದೆ ಎಂದು ಖರ್ಗೆ ಹೇಳಿದರು.
ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾ ಪಾಟೀಲ್ ವಿರುದ್ಧ ಬಿಜೆಪಿ, ಅನಗತ್ಯ ಅಪಪ್ರಚಾರ ಮಾಡುತ್ತಿದೆ. ಪ್ರತಿಸ್ಪರ್ಧಿ ಶೇಖಾವತ್ ಬಣ್ಣ ಬಯಲುಗೊಳಿಸುವ 20ಪ್ರಶ್ನೆಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಸಾಧ್ಯವಾದರೆ, ಬಿಜೆಪಿ ಉತ್ತರ ನೀಡಲಿ ಎಂದು ಖರ್ಗೆ ಸವಾಲು ಹಾಕಿದರು.
(ಯುಎನ್ಐ)