ರಾಷ್ಟ್ರ ಗೀತೆ ಮತ್ತು ನಾಡಗೀತೆಗಳು ಕಳೆದು ಹೋಗಿವೆ!?
ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ರಾಜ್ಯ ಸರ್ಕಾರದ ಪಠ್ಯಕ್ರಮದ ಪುಸ್ತಕಗಳ ರಕ್ಷಾ ಪುಟಕ್ಕೆ ಶ್ರೀರಕ್ಷೆಯಾಗಿದ್ದ ನಾಡಗೀತೆ, ರಾಷ್ಟ್ರಗೀತೆಗಳು ಕಣ್ಮರೆಯಾಗಿವೆ.
ರವೀಂದ್ರನಾಥ ಠಾಗೂರರ "ಜನಗಣ ಮನ ಅಧಿನಾಯಕ", ಬಂಕೀಮ ಚಂದ್ರರ "ವಂದೇ ಮಾತರಂ" ಹಾಗೂ ಕುವೆಂಪು ವಿರಚಿತ ನಾಡಗೀತೆ "ಜಯ ಭಾರತ ಜನನಿಯ ತನುಜಾತೆ" ಎಲ್ಲವೂ ಪಠ್ಯಪುಸ್ತಕಗಳಿಂದ ಸಂಪೂರ್ಣವಾಗಿ ಮಾಯವಾಗಿದೆ.1ರಿಂದ 10ನೆ ತರಗತಿವರೆಗಿನ ಪಠ್ಯಪುಸ್ತಕಗಳಲ್ಲಿ ನಾಡಗೀತೆ, ರಾಷ್ಟ್ರಗೀತೆ ಇರಬೇಕಿದ್ದ ಜಾಗದಲ್ಲಿ ಈಗ ಪ್ರವಾಸಿ ತಾಣಗಳ, ಮುದ್ರಕರ ವಿಳಾಸಗಳು ತುಂಬಿಕೊಂಡಿವೆ.
ರಾಜ್ಯ ಸರ್ಕಾರ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ ಹಾಗೇ ಕಾಣುವುದಿಲ್ಲ. ರಾಜ್ಯ ಪಠ್ಯಪುಸ್ತಕ ಸೊಸೈಟಿಯ ಸದಸ್ಯರು , ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಇನ್ನಿತರ ಸಂಬಂಧಪಟ್ಟವರು ದಿವ್ಯ ಮೌನ ತಳೆದಿದ್ದಾರೆ.ನಮ್ಮ ರಾಜ್ಯದಲ್ಲಿ ಈ ಬಗ್ಗೆ ಯಾರೂ ಗಮನಹರಿಸದಿರುವುದು ಅಚ್ಚ್ಚರಿಯ ಹಾಗೂ ಬೇಜವಾಬ್ದಾರಿಯ ಸಂಗತಿ ಎಂಬುದಂತೂ ಸತ್ಯ.
ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ನೇತೃತ್ವದಲ್ಲಿ ಪಠ್ಯಪುಸ್ತಕ ಸಮಿತಿ ಹಾಗೂ ಪರಿಷ್ಕರಣ ಸಮಿತಿಯವರು ಕಳೆದ ವರ್ಷ ಪಠ್ಯಕ್ರಮ ಬದಲಾಯಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ.
1906ರಲ್ಲಿ ನಡೆದ "ವಂಗ ಭಂಗ ಚಳುವಳಿ"ಯಲ್ಲಿ ಪ್ರಥಮ ಬಾರಿಗೆ ಹಾಡಲ್ಪಟ್ಟ ವಂದೇಮಾತರಂ ಗೀತೆಯ ಶತಮಾನೋತ್ಸವ ಆಚರಣೆ ಬಗ್ಗೆ ಎಲ್ಲೂ ಸದ್ದಿಲ್ಲ.ಅದರ ಬದಲಿಗೆ ನಾಳೆಯ ಪ್ರಜೆಗಳಾಗುವ ವಿದ್ಯಾರ್ಥಿಗಳು ಓದುವ ಪಠ್ಯಪುಸ್ತಕದಿಂದ ರಾಷ್ಟ್ರಗೀತೆ,ನಾಡಗೀತೆಗಳನ್ನು ಮಾಯಮಾಡಲಾಗಿದೆ!
ಕೆಲ ವರ್ಷಗಳ ಹಿಂದೆ ಕೇರಳದ ಪಠ್ಯಪುಸ್ತಕಗಳಲ್ಲಿ ಕಾಣಿಸಿಕೊಂಡಿದ್ದ ರಾಷ್ಟ್ರಗೀತೆ "ಜನಗಣ ಮನ" ದಲ್ಲಿ ಗುಜರಾತ್ ಎಂಬುದು ಮಾಯವಾಗಿತ್ತು. ಆನಂತರ ಬಿಜೆಪಿ ಹೋರಾಟ ನಡೆಸಿ, ಸರಿಪಡಿಸಿದ್ದರು ಎಂಬುದು ಈಗ ಇತಿಹಾಸ.
(ದಟ್ಸ್ ಕನ್ನಡ ವಾರ್ತೆ)