ಕೇಳ್ರಪ್ಪೊ ಕೇಳ್ರಿ, ಹೇಗಿದೆ ನೋಡಿ ಸರ್ಕಾರದ ಹೊಸ ಯೋಜನೆ
ಬೆಂಗಳೂರು : ಮಲೇರಿಯಾದಿಂದ ಪೀಡಿತಕ್ಕೊಳಗಾದ ಹಳ್ಳಿಗಳಲ್ಲಿ ಸೊಳ್ಳೆ ಪರದೆಗಳನ್ನು ಉಚಿತವಾಗಿ ಸರ್ಕಾರ ನೀಡಲಿದೆ.
ಈ ವಿಷಯ ಕೇಳಿ ಇದೊಂದು ಬಡವರ ಮೇಲೆ ಸೊಳ್ಳೆ ಪರದೆ ಎಳೆಯುವ ತಂತ್ರ ಎಂದು ಕೆಲವರು ವ್ಯಂಗ್ಯವಾಡಿದ್ದರೆ, ಕೆಲವರು ಗಹಗಹಿಸಿ ನಗುತ್ತಿದ್ದಾರೆ.
ವಿಧಾನಸಭೆಯಲ್ಲಿ ಜಯಪ್ರಕಾಶ ಹೆಗಡೆ ಎತ್ತಿದ ಪ್ರಶ್ನೆಗೆ ಉತ್ತರವಾಗಿ ಈಗಾಗಲೇ ಕೆಲ ಹಳ್ಳಿಗಳನ್ನು ಗುರುತಿಸಲಾಗಿದ್ದು, ಸದ್ಯದಲ್ಲಿಲೇ ಔಷಧೀಯ ಗುಣದ ಸೊಳ್ಳೆ ಪರದೆಗಳನ್ನು ವಿತರಿಸುವುದಾಗಿ ಆರೋಗ್ಯ ಸಚಿವ ಎ.ಅಶೋಕ್ ಹೇಳಿದ್ದಾರೆ.
ಕರ್ನಾಟಕದ ಹಳ್ಳಿಗಳಲ್ಲಿ ಮಳೆ ನೀರು ನಿಂತರೆ ಸರಾಗವಾಗಿ ಹರಿದು ಹೋಗಲು ಅನುವಾಗುವ ವ್ಯವಸ್ಥೆಯಿಲ್ಲ. ಮಲೇರಿಯಾದಂಥ ರೋಗಗಳನ್ನು ಹೇಗೆ ಹದ್ದುಬಸ್ತಿನಲ್ಲಿಡಬೇಕೆಂಬ ತಿಳಿವಳಿಕೆ ಅನೇಕ ಹಳ್ಳಿಗರಲ್ಲಿ ಇಲ್ಲ. ಸೊಳ್ಳೆ ಪರದೆ ವಿತರಣೆಯ ಬದಲು ಹಳ್ಳಿಗರಲ್ಲಿ ಈ ಕುರಿತಾಗಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.
ಸೊಳ್ಳೆ ನಾಶಕ್ಕೆ ಅಗತ್ಯವಾದ ಔಷಧಿ ಸಿಂಪಡನೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಮಲೇರಿಯಾ ಪೀಡಿತರಿಗೆ ಅಗತ್ಯವಾಗಿ ಬೇಕಾದ ಔಷಧಿಗಳನ್ನು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಒದಗಿಸಬೇಕು. ಆರೋಗ್ಯ ಕೇಂದ್ರಗಳಲ್ಲಿ ಕೆಲಸಕ್ಕೇ ಬಾರದ ಡಾಕ್ಟರುಗಳನ್ನು ಎಳೆದು ತರಬೇಕು.
ಅದು ಬಿಟ್ಟು, ಸೊಳ್ಳೆ ಪರದೆ ನೀಡುತ್ತೇನೆಂದರೆ, ಅದನ್ನು ಕಟ್ಟಲು ಜಾಗವೆಲ್ಲಿದೆ ಎನ್ನುತ್ತಾರೆ. ಗುಡಿಸಲುಗಳಲ್ಲಿ ಬದುಕುವ ಬಡವರು ಈ ಯೋಜನೆಗೆ ಹೇಗೆ ಸ್ಪಂದಿಸುವರೋ ನೋಡಬೇಕು. ಈ ಯೋಜನೆಗಾಗಿ ಮೊದಲು ಆರಿಸಿರುವ ಹಳ್ಳಿ ಶಿರಹಟ್ಟಿ.
(ದಟ್ಸ್ಕನ್ನಡ ವಾರ್ತೆ)