ಯಡೆಯೂರು : ಪುಟಾಣಿಯನ್ನು ಕೊಂದ ದೇವರ ಆನೆ!
ತುಮಕೂರು : ರೋಗರುಜಿನಗಳನ್ನು ಹೊರತುಪಡಿಸಿ, ಇತ್ತೀಚೆಗೆ ಏನೇನೋ ಕಾರಣಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಅಲ್ಲೆಲ್ಲೋ ಕೊಳವೆ ಬಾವಿಯಲ್ಲಿ, ಇನ್ನೆಲ್ಲೋ ಗರುಡಾ ಮಾಲ್ನಲ್ಲಿ, ಮತ್ತೆಲ್ಲೋ ನೀರಲ್ಲಿ ಮುಳುಗಿ ಸಾಯುತ್ತಿದ್ದಾರೆ. ಹೀಗೆ ಸಾವಿಗೆ ನಾನಾ ಕಾರಣ.
ಈಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಯಡಿಯೂರು ಕ್ಷೇತ್ರದಲ್ಲಿ, ಸಚಿನ್ ಎಂಬ ಎಂಟು ವರ್ಷದ ಬಾಲಕ, ಆನೆ ಕಾಲಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ. ಇಲ್ಲಿನ ಯಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿಯೇ ಈ ದುರಂತ ಸಂಭವಿಸಿದೆ.
ವಿವರ : ಬೆಂಗಳೂರಿನ ನಂದಿನಿ ಲೇಔಟ್ನ ಆಟೋ ಚಾಲಕ ಮಂಜು ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮದುವೆಗೆ ಹೋಗಿದ್ದರು. ಮದುವೆ ನಂತರ ಯಡೆಯೂರು ದೇವಸ್ಥಾನಕ್ಕೆ ತೆರಳಿದ್ದರು.
ರಾಜು ಪುತ್ರರಾದ ಸಂಜಯ್ ಮತ್ತು ಸಚಿನ್ ಆನೆಗೆ ಬಾಳೆ ಹಣ್ಣು ತಿನ್ನಿಸಲು ಮುಂದಾಗಿದ್ದರು. ಮೊದಲು ಹಣ್ಣನ್ನು ತಿಂದ ಆನೆ, ಸುಮ್ಮನಿತ್ತು. ಎರಡನೇ ಹಣ್ಣು ನೀಡಿದ ಸಚಿನ್ನನ್ನು ಸೊಂಡಿಲಿನಿಂದ ಎಳೆದುಕೊಂಡು, ತುಳಿದು ಸಾಯಿಸಿತು ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)