ರಾಮನಗರದ ಬಳಿ ಅಪಘಾತ : ಕಾರಿನಲ್ಲಿದ್ದ ನಾಲ್ವರ ಸಾವು
ಬುಧವಾರ ಬೆಳಗ್ಗೆ ನಡೆದ ವಾಹನ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿಗೆ 50ಕಿ.ಮೀ.ದೂರದಲ್ಲಿರುವ ರಾಮನಗರ ಸಮೀಪ ಈ ಅಪಘಾತ ಸಂಭವಿಸಿದೆ. ಮೈಸೂರಿಗೆ ಹೊರಟಿದ್ದ ನಾಲ್ವರು ಪ್ರಯಾಣಿಸುತ್ತಿದ್ದ ಕಾರು, ಬಸ್ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
* * *
ದೌರ್ಜನ್ಯ ಪ್ರಕರಣಗಳಿಗೆ ಸಹಾಯಧನ ಹಂಚಿಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಚ್ 2007 ರ ವರೆಗಿನ ಪ್ರಕರಣಗಳಿಗೆ ಸಹಾಯಧನವನ್ನು ಸಂಪೂರ್ಣವಾಗಿ ನೀಡಲಾಗಿದೆ ಎಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಜನಾಂಗಗಳ ಆಯೋಗದ ಅಧ್ಯಕ್ಷರಾದ ನೆಹರು. ಚ. ಓಲೇಕಾರ ಅವರು ಹೇಳಿದರು.
ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ 456 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು ಏಪ್ರಿಲ್ 2007 ರ ನಂತರ ದಾಖಲಾಗಿರುವ ಪ್ರಕರಣಗಳು ಮಾತ್ರ ವಿಲೇವಾರಿ ಆಗಬೇಕಾಗಿದೆ. ನೊಂದವರಿಗೆ ಸಹಾಯಧನ ನೀಡಲು ಜಿಲ್ಲೆಯಲ್ಲಿ ಹಣಕಾಸು ತೊಂದರೆ ಏನೂ ಇಲ್ಲವೆಂದು ಅವರು ತಿಳಿಸಿದರು.
* * *
ಹೆಚ್. ಎನ್. ಕೃಷ್ಣ ಅಧಿಕಾರ ಸ್ವೀಕಾರ
ಡಾ ಹೆಚ್. ಎನ್. ಕೃಷ್ಣ ಅವರು ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ಜುಲೈ ೪ ರಂದು, ನಗರದ ಡಾ ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿರುವ (ಗೇಟ್ ೨ ವಿಂಗ್) ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
* * *
ವಲಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ
ವಲಯ ಸಂರಕ್ಷಣಾಧಿಕಾರಿ ಹುದ್ದೆಯ ತರಬೇತಿಗಾಗಿ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆಮಾಡಲು ವಿಜ್ಞಾನ/ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜುಲೈ ೨೧ ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಆಯ್ಕೆ ಪ್ರಾಧಿಕಾರದ ಕಚೇರಿ, ಕರ್ನಾಟಕ ರಾಜ್ಯಪತ್ರ ಅಥವಾ ಇಲಾಖಾ ವೆಬ್ಸೈಟ್ www.Karnatakaforest.gov.in.ಅನ್ನು ನೋಡಬಹುದಾಗಿದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.
* * *
ವೃತ್ತಿಪರ ಶಿಕ್ಷಣಕ್ಕೆ ಅರ್ಜಿ ಆಹ್ವಾನ
ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ಮೈಸೂರು ಮತ್ತು ಗುಲ್ಬರ್ಗಾ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿರುವ ವೃತ್ತಿಪರ ಶಿಕ್ಷಣಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಸಂಬಂಧಪಟ್ಟ ಎಲ್ಲಾ ಜಿಲ್ಲಾದಿಕಾರಿಗಳ ಕಚೇರಿಗಳಲ್ಲಿನ ಭೂಮಾಪನ ಶಾಖೆ, ಬೆಂಗಳೂರಿನ ಕೆ. ಆರ್. ವೃತ್ತದಲ್ಲಿರುವ ಕೇಂದ್ರ ಕಚೇರಿಯಲ್ಲಿ ಮತ್ತು ಮೈಸೂರು ಹಾಗೂ ಗುಲ್ಬರ್ಗಾ ಭೂಮಾಪನ ತರಬೇತಿ ಸಂಸ್ಥೆಗಳಲ್ಲಿ 10 ರೂ ಗಳನ್ನು ಪಾವತಿಸಿ ಅರ್ಜಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 16 ಕೊನೆಯ ದಿನಾಂಕವಾಗಿರುತ್ತದೆ.
* * *
ನೀರು ಮಾತ್ರವಲ್ಲ ಸಾರಾಯಿಲ್ಲದಿದ್ದರೂ ಜನ ಸಾಯ್ತಾರೆ!
ಚಟಗಳೇ ಹೀಗೆ. ಕಲಿಯುವ ತನಕ ಕೆಣಕುವುದಿಲ್ಲ. ಕಲಿತ ಮೇಲೆ ಬಿಡುವುದಿಲ್ಲ! ಸರ್ಕಾರ ಸಾರಾಯಿ ನಿಷೇಧಿಸಿದ್ದನ್ನು ಚಟವಾದಿಗಳು ವಿರೋಧಿಸಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋದ ಕೆಜಿಎಫ್ನ ಕುಡುಕನೊಬ್ಬ, ಆತ್ಮಹತ್ಯೆ ಮೂಲಕ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾನೆ.
ದೇಶದಲ್ಲಿ ಅನ್ನ ಮತ್ತು ನೀರಿಲ್ಲದೇ ಸತ್ತವರ ಬಗ್ಗೆ ನಮಗೆ ಗೊತ್ತು. ಆದರೆ ಕೆಜಿಎಫ್ನ ಕುಮಾರ್(40) ಎಂಬ ವ್ಯಕ್ತಿ, ಸಾರಾಯಿ ಸಿಗದ ಕಾರಣ ನೇಣಿಗೆ ಶರಣಾಗಿದ್ದಾನೆ. ಆತನಿಗೆ ಬುದ್ಧಿ ಸರಿಯಿರಲಿಲ್ಲ ಎನ್ನಲಾಗಿದೆ.