ಪ್ರತಿಭಾ ಪಾಟೀಲ್ ವಿರುದ್ಧ ಹೂಡಿದ್ದ ಪಿಐಎಲ್ ವಜಾ
ನವದೆಹಲಿ : ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ಪ್ರತಿಭಾ ಪಾಟೀಲ್ ನಾಮಿನೇಷನ್ನ್ನು ರದ್ದುಪಡಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಇಂದು ವಜಾ ಮಾಡಿದೆ.
ಯುಪಿಎ ಮತ್ತು ಎಡಪಕ್ಷಗಳಿಗೆ ಸಾಕಷ್ಟು ತಲೆಬಿಸಿ ಮಾಡಿದ್ದ ಈ ಅರ್ಜಿಯನ್ನು ವಜಾ ಮಾಡಿದ್ದರಿಂದ ಎರಡೂ ಪಕ್ಷಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.
ಮೋಹನ್ಲಾಲ್ ಶರ್ಮಾ ಎಂಬ ನ್ಯಾಯವಾದಿ ವೈಯಕ್ತಿಕವಾಗಿ ಹೂಡಿದ್ದ ಅರ್ಜಿಯಲ್ಲಿ, ಪ್ರತಿಭಾ ಪಾಟೀಲ್ ಅವರು ದಿವಾಳಿ ಎದ್ದ ಪ್ರತಿಭಾ ಮಹಿಳಾ ಸಹಕಾರ ಬ್ಯಾಂಕ್ನಿಂದ ಇನ್ನೂ ಬಿಡುಗಡೆ ಹೊಂದಿಲ್ಲದಿದ್ದರಿಂದ ಪಾಟೀಲ್ ಅವರ ನಾಮನಿರ್ದೇಶನವನ್ನು ರದ್ದುಪಡಿಸಬೇಕೆಂದು ಕೇಳಿದ್ದರು.
ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ತರುಣ್ ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಕೆ.ಬಾಲಸುಬ್ರಮಣ್ಯನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಸಂವಿಧಾನದ 32ನೇ ಅನುಚ್ಛೇದದಲ್ಲಿ ಹಸ್ತಕ್ಷೇಪ ಮಾಡುವ ಕಾರಣವೇ ಇಲ್ಲ, ಆದರೆ, ಅರ್ಜಿದಾರ ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸಬಹುದುಎಂದು ಹೇಳಿದೆ.
ಪಟ್ಟು ಬಿಡದ ಶರ್ಮಾ, ಪಾಟೀಲ್ ಅವರು ಕಾರ್ಗಿಲ್ ಯುದ್ಧ ಪರಿಹಾರ ನಿಧಿಗಾಗಿ ಸಂಗ್ರಹಿಸಿದ್ದ ಹಣವನ್ನು ಪರಿಹಾರ ನಿಧಿಗೆ ನೀಡಿಲ್ಲ ಮತ್ತು ಈ ಕಾರಣಕ್ಕಾಗಿ ಅವರಿಗೆ ನೀಡಿದ್ದ ನೋಟೀಸಿಗೂ ಉತ್ತರ ಕೊಟ್ಟಿಲ್ಲ ಎಂದದ್ದಕ್ಕೆ, ನಾವೂ ನಿಧಿಗೆ ಕಾಣಿಕೆ ನೀಡಿದ್ದೇವೆ, ಅದೇನಾಗಿದೆ ಎಂದೇ ಗೊತ್ತಿಲ್ಲ, ನಾಮನಿರ್ದೇಶನವನ್ನು ತಿರಸ್ಕರಿಸಲು ಇವು ಸರಿಯಾದ ಕಾರಣಗಳಲ್ಲ ಎಂದು ಅರ್ಜಿಯನ್ನು ನ್ಯಾಯಮೂರ್ತಿಗಳು ವಜಾ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)