ಯಡಿಯೂರಪ್ಪರನ್ನು ಘೇರಾವೋ ಮಾಡಿದ ಮಂಡ್ಯ ರೈತರು
ಮೈಸೂರು : ಕೃಷ್ಣರಾಜ ಸಾಗರದಿಂದ ತಮಿಳುನಾಡಿಗೆ ನೀರು ಬಿಡಲು ಆದೇಶಿಸಿದ್ದಕ್ಕೆ ಮಂಡ್ಯದ ರೈತರು ಇಂದು ಉಪ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಘೇರಾವೋ ಮಾಡಿದರು.
ಯಡಿಯೂರಪ್ಪ ಅವರು ನಂತರ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದ್ದು, ನೀರು ಅಪಾಯದ ಮಟ್ಟ ಮುಟ್ಟಿದಾಗ ಮಾತ್ರ ನೀರು ಬಿಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸ್ಪಷ್ಟೀಕರಣ ನೀಡಿದರು. ಅಧಿಕಾರಿಗಳು ಈ ಕುರಿತು ಭರವಸೆ ನೀಡಿದಾಗ ರೈತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
*
ಜುಲೈ 5ರಿಂದ ಮಳೆಗಾಲದ ಅಧಿವೇಶನ
ಬೆಂಗಳೂರು : 19 ದಿನಗಳ ಮಳೆಗಾಲದ ಅಧಿವೇಶನ ಜುಲೈ 5ರಿಂದ ಆರಂಭವಾಗಲಿದೆ.
ಪಂಚಾಯತ್ ರಾಜ್, ಕನಿಷ್ಠ ವೇತನ ಕುರಿತಂತೆ ಒಟ್ಟು 21 ಬಿಲ್ಗಳು ಅಧಿವೇಶನಗಲ್ಲಿ ಚರ್ಚೆಯಾಗಲಿವೆ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಕೃಷ್ಣ ಮಂಗಳವಾರ ತಿಳಿಸಿದರು. ಜುಲೈ 31ರಂದು ಅಧಿವೇಶನ ಮುಕ್ತಾಯವಾಗಲಿದೆ.
*
ಸದ್ಯದಲ್ಲಿಯೇ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ
ಮತ್ತೊಂದು ದರ ಹೆಚ್ಚಳಕ್ಕೆ, ದೇಶದ ನಾಗರಿಕರು ಈಗಲೇ ಮಾನಸಿಕವಾಗಿ ಸಿದ್ಧರಾಗಬೇಕಾಗಿದೆ! ಸದ್ಯದಲ್ಲಿಯೇ ಪೆಟ್ರೋಲ್ ದರ 2ರೂ. ಮತ್ತು ಡೀಸೆಲ್ ದರ 1ರೂ.ಹೆಚ್ಚಳವಾಗುವ ಸಾಧ್ಯತೆಗಳಿವೆ. ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಹೆಚ್ಚುತ್ತಿರುವ ಪರಿಣಾಮ, ತೈಲ ಕಂಪನಿಗಳಿಗೆ ಪ್ರತಿನಿತ್ಯ 170ಕೋಟಿ ರೂ. ನಷ್ಟವಾಗುತ್ತಿದೆ. ಕಳೆದ ಫೆ.15ರಂದು ತೈಲ ದರ ಹೆಚ್ಚಿಸಿದ್ದ ಕೇಂದ್ರ ಸರ್ಕಾರ, ಮತ್ತೆ ದರ ಹೆಚ್ಚಳ ಮಾಡುವ ಅನಿವಾರ್ಯತೆಗೆ ಸಿಲುಕಿದೆ ಎನ್ನಲಾಗಿದೆ.