ಅಪಾಯದ ಮಟ್ಟದಲ್ಲಿ ಹರಿಯುತಿಹಳು ಕೊಡಗಿನ ಕಾವೇರಿ
ಮೈಸೂರು : ಕೊಡಗು, ಮೈಸೂರು, ಹಾಸನ ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಕಾವೇರಿ ಮೈತುಂಬಿ ಹರಿಯುತ್ತಿದ್ದಾಳೆ.
ಎಲ್ಲಕ್ಕಿಂತ ಹೆಚ್ಚಾಗಿ ಮಳೆಯಾಗುತ್ತಿರುವ ಕೊಡಗಿನಲ್ಲಿ ಕಾವೇರಿ ಮತ್ತು ಇತರ ಉಪನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಜನಜೀವನ ನಿಂತ ನೀರಂತಾಗಿದೆ. ಜಿಲ್ಲೆಯಲ್ಲಿ ಓರ್ವ ರೈತ ಗೋಡೆ ಕುಸಿದಿದ್ದರಿಂದ ಸಾವಿಗೀಡಾಗಿದ್ದಾನೆ.
ಕೆಆರ್ಎಸ್ಗೆ ಭರ್ತಿ ನೀರು : ಕೃಷ್ಣರಾಜ ಸಾಗರ ಮತ್ತೆ ಕಂಗೊಳಿಸುತ್ತಿದೆ. ಜಲಾಶಯಕ್ಕೆ 55,625 ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, 19,897 ಕ್ಯೂಸೆಕ್ಸ್ ನೀರನ್ನು ಹರಿದುಬಿಡಲಾಗುತ್ತಿದೆ. ಈಗ ಜಲಾಶಯದ ಮಟ್ಟ 97.55 ಅಡಿ ತಲುಪಿದೆ.
ಹಾಸನ ಜಿಲ್ಲೆಯಲ್ಲಿಯೂ ಸಾಕಷ್ಟು ಮಳೆಯಾಗಿರುವುದರಿಂದ ಹೇಮಾವತಿ ಜಲಾಶಯ ಭರ್ತಿಯಾಗುತ್ತಿದೆ. ಗರಿಷ್ಠ ಮಟ್ಟ 2922 ಅಡಿಗೆ ಪ್ರತಿಯಾಗಿ ನೀರಿನ ಮಟ್ಟ 2899 ಅಡಿ ತಲುಪಿದೆ.
ಇನ್ನು ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಗರಿಷ್ಠ ಮಟ್ಟ 2284 ತಲುಪಲು ಕೇವಲ 5 ಅಡಿ ಬಾಕಿ ಇದೆ. ಕೇರಳದ ವೈನಾಡಿನಲ್ಲಿ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಅಪಾಯದ ಮಟ್ಟ ಮುಟ್ಟುವ ಹಂತದಲ್ಲಿದೆ. ಹಾರಂಗಿ ಜಲಾಶಯ ಕೂಡ ಭರ್ತಿಯಾಗಿದೆ. ಅದರ ಗರಿಷ್ಠ ಮಟ್ಟ 2859 ಅಡಿ. ಈಗ ತಲುಪಿರುವುದು 2844.5 ಅಡಿ.
(ದಟ್ಸ್ ಕನ್ನಡ ವಾರ್ತೆ)