ಜೂ.29ರೊಳಗೆ ಅಸ್ತಿ ವಿವರ : ಶಾಸಕರಿಗೆ ಮತ್ತೆ ತಾಪತ್ರಯ
ಬೆಂಗಳೂರು : ಶಾಸಕರು ಹಾಗೂ ಅವರ ಕುಟುಂಬ ಆಸ್ತಿ ವಿವರ ಸಲ್ಲಿಸಲು, ಜೂನ್ 29ರವರೆಗೆ ಗಡುವು ನೀಡಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಶಾಸಕರು ಜನವರಿ 1, 2006ರಿಂದ ಡಿಸೆಂಬರ್ 31, 2006ರವರೆಗಿನ ತಮ್ಮ ಆದಾಯ ಮತ್ತು ಖರ್ಚಿನ ಮಾಹಿತಿ ನೀಡಬೇಕು. ಜೂನ್ 29ರ ಸಂಜೆ 5.30ರೊಳಗಾಗಿ ಮಾಹಿತಿ ಸಲ್ಲಿಸಬೇಕು ಎಂದು ತಿಳಿಸಿದರು.
ಲೋಕಾಯುಕ್ತ ಕಾಯ್ದೆಯ 22ನೇ ಪರಿಚ್ಛೇದದ ಅನ್ವಯ, ಪ್ರತಿಯೊಬ್ಬ ಶಾಸಕ ಹಾಗೂ ಅವರನ್ನು ಆಶ್ರಯಿಸಿದ ಕುಟುಂಬದ ಸದಸ್ಯರು ಜೂನ್ 30ರೊಳಗೆ ಆಸ್ತಿವಿವರ ನೀಡಬೇಕು.
ಈ ಗಡುವು ಮೀರಿದ ಶಾಸಕರಿಗೆ ನೋಟೀಸ್ ನೀಡಲಾಗುವುದು. ಆನಂತರ ಎರಡು ತಿಂಗಳು ಹೆಚ್ಚುವರಿ ಸಮಯ ನೀಡಲಾಗುವುದು. ಈ ಕುರಿತು ರಾಜ್ಯಪಾಲರಿಗೆ ವರದಿ ಒಪ್ಪಿಸಲಾಗುವುದು. ಆ ಪರಿಣಾಮ ಶಾಸಕರು ಅನರ್ಹಗೊಳ್ಳುವ ಸಾಧ್ಯತೆಗಳೂ ಇವೆ ಎಂದು ವಿವರಿಸಿದರು.
ತಾಪತ್ರಯ : ಲೋಕಾಯುಕ್ತರ ನೀತಿಯಿಂದ ಶಾಸಕರು ಪೇಚಿಗೆ ಸಿಲುಕಿದ್ದಾರೆ. ಗಳಿಸಿದ್ದಕ್ಕಿಂತ ಕದ್ದ ಹಣವೇ ಜಾಸ್ತಿ ಇದೆ. ಇದಕ್ಕೆಲ್ಲ ಲೆಕ್ಕ ನೀಡೋದು ಹೇಗೆ? ಕಪ್ಪು ಹಣ ಬಚ್ಚಿಡೋದು ಹೇಗೆ ಅನ್ನುವ ಬಗ್ಗೆ ಕೆಲ ಶಾಸಕರು ತಲೆಕೆಡಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)