ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಪ್ರೋತ್ಸಾಹ
ಕರ್ನಾಟಕ ಸರ್ಕಾರವು 2007-08ನೇ ಸಾಲಿನಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಕರ್ನಾಟಕ ಖಾಯಂ ನಿವಾಸಿಗಳಿಗೆ ಪ್ರೋತ್ಸಾಹಧನ ನೀಡಲು ಉದ್ದೇಶಿಸಿದೆ. ಈ ಉದ್ದೇಶಕ್ಕಾಗಿ ಪಾಸ್ಪೋರ್ಟ್ನಲ್ಲಿ ನಮೂದಿಸಲಾಗಿರುವ ವಿಳಾಸವನ್ನು ಪರಿಗಣಿಸಲಾಗುವುದು.
ಸರ್ಕಾರದಿಂದ ಧನಸಹಾಯ ಪಡೆಯಲು ಇಚ್ಛಿಸುವ ಯಾತ್ರಿಕರು ತಾವು ಯಾತ್ರೆ ಮುಗಿಸಿದ್ದಕ್ಕೆ ಪಡೆಯುವ ಪ್ರಮಾಣ ಪತ್ರದ ದಿನಾಂಕದಿಂದ ಎರಡು ತಿಂಗಳೊಳಗೆ ನಿಗದಿತ ನಮೂನೆಯಲ್ಲಿ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಶ್ರೀ ಮಲೈಮಹದೇಶ್ವರ ವಾರ್ತಾ ಭವನ, ಮಿಂಟೋ ಆಸ್ಪತ್ರೆ ಹತ್ತಿರ, ಚಾಮರಾಜಪೇಟೆ, ಬೆಂಗಳೂರು ಇವರಿಗೆ ಅರ್ಜಿ ಸಲ್ಲಿಸಬೇಕು.
***
ಸರಳ
ಸಾಮೂಹಿಕ
ವಿವಾಹ
ಸಾಮೂಹಿಕ ವಿವಾಹ ನಮ್ಮ ದಿವ್ಯ ಪರಂಪರೆಯ ಪ್ರತೀಕ. ಆಡಂಬರವಿಲ್ಲದ ಸರಳ ವಿವಾಹ ಸಮಾಜಕ್ಕೆ ಮಾದರಿಯಾಗಿದ್ದು ಇದೊಂದು ಉನ್ನತ ಸಮಾಜ ಸೇವೆ ಎಂದು ರಾಜ್ಯಪಾಲ ಶ್ರೀ ಟಿ.ಎನ್. ಚತುರ್ವೇದಿ ಅವರು ಹೇಳಿದರು.
ಕನಕಪುರ ತಾಲ್ಲೂಕಿನ ದೊಡ್ಡಮರಳವಾಡಿಯಲ್ಲಿ ಕೃಷಿ ತಪೋಕ್ಷೇತ್ರ , ದೊಡ್ಡಮರಳವಾಡಿ ಸಿಂಧ್ಯ ಪ್ರತಿಷ್ಠಾನ (ರಿ) ಮತ್ತು ಮರಳವಾಡಿ ವಿದ್ಯಾಸಂಸ್ಥೆ ಆಯೋಜಿಸಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಗುರುವಂದನೆ, ಸರಳ ಸಾಮೂಹಿಕ ವಿವಾಹ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ವಾಟಿಸಿ ಅವರು ಮಾತನಾಡುತ್ತಿದ್ದರು.
ಸಾಮೂಹಿಕ ವಿವಾಹಗಳು ಹೆಚ್ಚು ಜರುಗಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಮೀಣ ಜನತೆಗೆ ಇದೊಂದು ವರದಾನವಾಗಿ ಪರಿಣಮಿಸಬೇಕು. ಜನ ಸಾಮಾನ್ಯರಲ್ಲಿ ಸಾಮಾಜಿಕ ಭದ್ರತೆಯನ್ನು ತರುವ ಸರಳ ವಿವಾಹಗಳು ಸಾಮಾಜಿಕ ಕ್ರಾಂತಿಯಾಗಬೇಕೆಂದು ಅವರು ಹೇಳಿದರು.
ಗುರುವಂದನೆ: ಡಾ: ಶಿವಕುಮಾರಸ್ವಾಮೀಜಿಗಳಿಗೆ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ, ಅವರ ಅನುಪಸ್ಥಿತಿಯಲ್ಲಿ ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಸಿದ್ದಲಿಂಗಮಹಾಸ್ವಾಮೀಗಳಿಗೆ 1ಲಕ್ಷ ರೂ. ನಗದು ಹಾಗೂ ಫಲ ಪುಷ್ಪ ನೀಡುವ ಮೂಲಕ ರಾಜ್ಯಪಾಲರು, ಪಿ.ಜಿ.ಆರ್. ಸಿಂಧ್ಯಾ, ಎಂ.ವಿ. ರಾಜಶೇಖರನ್ ಅವರು ಗುರುವಂದನೆ ಸಲ್ಲಿಸಿದರು.
***
ತೊಂದರೆಗಳ
ನಿವಾರಣೆಗೆ
ಸಲಹೆ
ಸ್ವೀಕಾರ
ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯು ಸರ್ಕಾರದ ಅಧಿನಿಯಮಗಳು, ಅಧಿಸೂಚನೆಗಳು, ನಿಯಮಗಳು, ಉಪನಿಯಮಗಳು ಹಾಗೂ ಆದೇಶಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಿಸಲು, ಸಲಹೆ ಸೂಚನೆಗಳನ್ನು ಸ್ವೀಕರಿಸಲು ಸಮಿತಿಯಿಂದ ಪ್ರತ್ಯೇಕವಾದ ವೆಬ್ಸೈಟ್ www.kar.nic.in/kla/slc.htm ತೆರೆದಿದೆ.
***
ಯುವ
ಪ್ರಶಸ್ತಿಗೆ
ಅರ್ಜಿ
ಆಹ್ವಾನ
ಜಿಲ್ಲಾ ನೆಹರೂ ಯುವ ಕೇಂದ್ರ, ಬೆಂಗಳೂರು 2006-07ನೇ ಸಾಲಿನ ಯುವ ಪ್ರಶಸ್ತಿ ಹಾಗೂ ಯುವಕ, ಯುವತಿ ಸಂಘಗಳಿಗೆ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸೊಸೈಟಿ ಆಕ್ಟ್ ಪ್ರಕಾರ ನೋಂದಣಿ ಆದ ಸಂಘಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಯುವ ಪ್ರಶಸ್ತಿ ರೂ. 2000(ಎರಡು ಸಾವಿರ ರೂ. ಮಾತ್ರ) ಇಬ್ಬರಿಗೆ ನೀಡಲಾಗುವುದು. ಸಂಘ ಪ್ರಶಸ್ತಿ ರೂ. 10000(ರೂ. ಹತ್ತು ಸಾವಿರ ಮಾತ್ರ) ಒಂದು ಸಂಘಕ್ಕೆ ಮಾತ್ರ ನೀಡಲಾಗುವುದು. ಪ್ರಶಸ್ತಿಗಳನ್ನು ನವೆಂಬರ್ 2007ರಲ್ಲಿ ನೀಡಲಾಗುವುದು.