ಮಹಾದಾಯಿ ಯೋಜನೆಗೆ ಸೋನಿಯಾ ದಯೆ ತೋರೇ...
ಬೆಂಗಳೂರು : ಮಹಾದಾಯಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಯುಪಿಎ ಅಧ್ಯ ಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ಸಿಂಗ್ ಅವರನ್ನು ಭೇಟಿಯಾಗಲು ರಾಜ್ಯ ಕಾಂಗ್ರೆಸ್ ನಾಯಕರು ತಯಾರಿ ನಡೆಸಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಚಂದ್ರಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ತಿಂಗಳಾಂತ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವ ದ ನಿಯೋಗ ದೆಹಲಿಗೆ ತೆರಳಲಿದೆ. ಎಲ್ಲ ಅಡೆತಡೆಗಳನ್ನು ಬಗೆಹರಿಸಿ ಕಳಸಾ ಬಂಡೂರಿ ಯೋಜನೆ ಸುಸೂತ್ರವಾಗಿ ಪೂರ್ಣಗೊಳಿಸಲು ಅವಕಾಶ ಮಾಡಿಕೊಡುವಂತೆ ನಿಯೋಗ ಮನವಿ ಪತ್ರ ಸಲ್ಲಿಸಲಿದೆ ಎಂದು ವಿವರಿಸಿದರು.
ಹಿಂದಿನ ಎನ್ಡಿಎ ಸರ್ಕಾರ ಯೋಜನೆಗೆ ತಡೆಯೊಡ್ಡಿದೆ ಎಂದು ಆರೋಪಿಸಿದ ಅವರು, ಇಬ್ಬರೂ ನಾಯಕರ ಮುಂದೆ ಯೋಜನೆಯ ವಾಸ್ತವಾಂಶಗಳನ್ನು ವಿವರಿಸಿ ಸದ್ಯಕ್ಕಿರುವ ತಡೆಯನ್ನು ತೆಗೆದುಹಾಕುವಂತೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಜನ ಏನಂತಾರೆ...?:
ಗೋವಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಕಳಸಾ ಬಂಡೂರಿ ಯೋಜನೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದ ಜನತೆಯಲ್ಲಿ ಆಘಾತವುಂಟುಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ.
ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಈ ಬಗೆಗಿನ ಆರೋಪಗಳನ್ನು ಎನ್ಡಿಎ ಮೇಲೆ ಹಾಕುತ್ತಿರುವುದು ಕೊಳಕು ರಾಜಕೀಯವೇ ಹೊರತು ಮತ್ತೇನೂ ಅಲ್ಲ ಎಂಬುದು ಜನಸಾಮಾನ್ಯರ ಮಾತು.
ಯೋಜನೆ ಯಾಕೆ?:
ಮಹಾದಾಯಿ ನದಿ ನೀರನ್ನು ಕಳಸಾ ಬಂಡೂರಿ ನಾಲಾ ಮೂಲಕ ಹರಿಸಿ, ಆ ಮೂಲಕ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ಹಾಗೂ ನವಲಗುಂದ, ನರಗುಂದ ಪಟ್ಟಣಗಳಿಗೆ ಕುಡಿಯುವ ಪೂರೈಸುವುದು ಯೋಜನೆಯ ಗುರಿಯಾಗಿದೆ.
(ದಟ್ಸ್ ಕನ್ನಡ ವಾರ್ತೆ)