ಶಿವಾಜಿ :ಗಂಗರಾಜು ಉತ್ಸುಕತೆ ಎಷ್ಟು ಸರಿ? ಎಷ್ಟು ತಪ್ಪು?
ಬೆಂಗಳೂರು : ವಿರೋಧದ ಕಪ್ಪು ಬಾವುಟಗಳ ಮಧ್ಯೆಯೂ ರಜನಿಕಾಂತ್ ಅಭಿನಯದ ಶಿವಾಜಿ ಬಿಡುಗಡೆಗೆ ಬೆಂಗಳೂರು ಸೇರಿದಂತೆ, ಕರ್ನಾಟಕದಲ್ಲಿ ಸಿದ್ಧತೆಗಳು ನಡೆದಿವೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರೂ ಮತ್ತು ರಜನಿ ಗೆಳೆಯರೂ ಆದ ಹೆಚ್.ಡಿ.ಗಂಗರಾಜು ವಿತರಣೆಯ ಹೊಣೆ ಹೊತ್ತಿದ್ದಾರೆ.ಗಂಗರಾಜು ಅವರ ಧೋರಣೆಯನ್ನು ಕನ್ನಡ ಪರ ಸಂಘಟನೆಗಳು ಖಂಡಿಸಿವೆ.
ಕಾವೇರಿ ವಿವಾದದ ಹಿನ್ನೆಲೆ, ಶಿವಾಜಿಬಿಡುಗಡೆಯನ್ನು ತಡೆಯುತ್ತಿದ್ದೇವೆ. ಈ ಸಂದರ್ಭದಲ್ಲಿ ಪಕ್ಕಾ ವ್ಯಾಪಾರಿಯಂತೆ ಗಂಗರಾಜು ವರ್ತಿಸುತ್ತಿದ್ದಾರೆ ಎಂಬುದು ಕನ್ನಡ ಸಂಘಟನೆಗಳ ದೂರು.
ರಜನಿಕಾಂತ್ ರ ಹಿಂದಿನ ಎಲ್ಲಾ ಚಿತ್ರಗಳನ್ನೂ ಬಿಡುಗಡೆ ಮಾಡಿರುವ ಗಂಗರಾಜು, ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ ಹತ್ತೇ ಹತ್ತು ಪ್ರತಿಗಳನ್ನು ಮಾತ್ರ ರಾಜ್ಯದಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಅವರು ಸುದ್ದಿಗಾರರಿಗೆ ಹೇಳಿದ್ದಾರೆ.
ಕನ್ನಡಕ್ಕೆ ನನ್ನ ಮೊದಲ ಆಧ್ಯತೆ. ರಜನಿಕಾಂತ್ ಸಾರ್ ಬಗ್ಗೆ ನನದೆ ವಿಶೇಷ ಗೌರವ ಎಂದಿರುವ ಅವರು, 3.25ಕೋಟಿಗಳಿಗೆ ಶಿವಾಜಿ ಚಿತ್ರದ ಹಕ್ಕುಗಳನ್ನು ಪಡೆದಿದ್ದಾರೆ.
ಬೆಂಗಳೂರು ಸೇರಿದಂತೆ ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗದಲ್ಲಿ ಶಿವಾಜಿ ಚಿತ್ರ ಬಿಡುಗಡೆಗೊಳ್ಳಲಿದೆ. ಕಾವೇರಿ ಕಾವು ಮೈಸೂರು ವ್ಯಾಪ್ತಿಯಲ್ಲಿ ಇರುವುದರಿಂದ, ಅಲ್ಲಿ ಪ್ರದರ್ಶನ ಇರುವುದಿಲ್ಲ ಎಂದು ಗಂಗರಾಜು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)