ಆನು ದೇವಾ ಚರ್ಚೆ: ಭುಗಿಲೆದ್ದ ತತ್ವ, ಆದರ್ಶ, ಮತೀಯ ಸಂಘರ್ಷ
ಬೆಂಗಳೂರು: ಡಾ. ಬಂಜಗೆರೆ ಜಯಪ್ರಕಾಶ್ ಅವರ ವಿವಾದಿತ ಕೃತಿ ‘ಆನು ದೇವಾ ಹೊರಗಣವನು’ ಕುರಿತು ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರ ಏರ್ಪಡಿಸಿದ್ದ ಮುಕ್ತ ಚರ್ಚೆಯಲ್ಲಿ ಪುಸ್ತಕದ ಪರ ಮತ್ತು ವಿರೋಧಿಗಳು ಪರಸ್ಪರ ಕೈ ಕೈ ಮಿಲಾಯಿಸಿ ರಣರಂಗ ಮಾಡಿದರು.
ಸಭೆಯ ಆರಂಭದಲ್ಲೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂಪಾ ಪ್ರಾಸ್ತಾವಿಕ ಮಾತುಗಳನ್ನಾಡಿ ಮೈಕನ್ನು ಸಾಹಿತಿ ಕೆ. ಮರುಳಸಿದ್ದಪ್ಪ ಅವರಿಗೆ ಹಸ್ತಾಂತರಿಸುತ್ತಿದ್ದಂತೆಯೇ ಬಸವ ಧರ್ಮಪೀಠದ ದಯಾನಂದ ಸ್ವಾಮೀಜಿ ‘ ಬಸವಣ್ಣ ...ಮಗ ಅಲ್ಲ ’ ಎಂದು ಕೂಗುತ್ತಾ , ಏಕವಚನದಿಂದ ಸಭೆಯ ಆಯೋಜಕರು ಮತ್ತು ಕೃತಿಯ ಲೇಖಕ ರನ್ನು ನಿಂದಿಸಲಾರಂಭಿಸಿದರು.
ಈ ಸಂದರ್ಭದಲ್ಲಿ ಸಮಾಧಾನಪಡಿಸಲು ಮುಂದಾದ ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್ ಅವರ ಮೇಲೆ ಸ್ವಾಮೀಜಿ ಹಲ್ಲೆ ನಡೆಸಿದರೆನ್ನಲಾಗಿದೆ.
ಚರ್ಚೆಗೆ ವೇದಿಕೆಯಾಗ ಬೇಕಿದ್ದ ಸಭೆ ಯುದ್ಧದ ಅಖಾಡವಾಗಿ ಮಾರ್ಪ ಟ್ಟಿತು. ಇಡೀ ಚರ್ಚೆಯನ್ನು ಶಾಂತಿಯಿಂದ ಕುಳಿತು ಕೇಳಲು ಬಂದಿದ್ದ ಪ್ರೇಕ್ಷಕರಿಗೆ ಮಾತ್ರ ಚಂಪಾ ನಿರ್ದೇಶನದಲ್ಲಿ ನಿಜಕ್ಕೂ ಒಂದು ಅದ್ಭುತ ನಾಟಕ ನೋಡಿದ ಅನುಭವವಾದಂತ್ತಿತ್ತು, ಗದ್ದಲದ ವಾತಾವರಣವನ್ನು ತಿಳಿಗೊಳಿಸಲು ಹತ್ತು ನಿಮಿಷದ ವಿರಾಮದ ನಂತರ ಮತ್ತೆ ಸಭೆ ಸೇರಿತು.
ಆದರೆ, ಬಸವತತ್ವವನ್ನು ಮರೆತ ಅನುಯಾಯಿಗಳು, ತಾಳ್ಮೆ ಕಳೆದುಕೊಂಡ ಸಾಹಿತಿಗಳ ನಡುವೆ ಮಾತಿನ ಚಕಮಕಿ ಮುಗಿಲು ಮುಟ್ಟಿತು. ಸಭಾ ಮಾರ್ಯಾದೆಯಿರಲಿ, ಪ್ರೇಕ್ಷಕರಿಗೆ ಗೊಂದಲ- ಗದ್ದಲ ಹತ್ತಿರದ ಚಾಮರಾಜಪೇಟೆ ಪೊಲೀಸ್ ಠಾಣೆಗೆ ತಲುಪಿ, ಪೊಲೀಸರು ಬಂದರು. ಆದರೆ ಗದ್ದಲದ ನಡುವೆ ಯಾರಿಗೆ ಬೆಂಬಲ ನೀಡಬೇಕು, ಏನು ಮಾಡಬೇಕು ಎಂಬುದು ತಿಳಿಯದೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.
ಕಸಾಪಕ್ಕೆ ಗದ್ದಲ ಹೊಸತೇನಲ್ಲ:
ಮೂರು ವರ್ಷಗಳ ಕೆಳಗೆ ನಾಡಗೀತೆ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅಂದಿನ ಕ.ಸಾ.ಪ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರನ್ನು ಸಭಿಕರು ಜಗ್ಗಾಡಿ, ಪಂಚೆ ಎಳೆದಿದ್ದರು. ಕಸಾಪ ಸಾಹಿತ್ಯ ಚರ್ಚೆಗಿಂತ ಗದ್ದಲ ವೇದಿಕೆಯಾಗುತ್ತಿರುವುದು ಅಪಮಾನಕರ ಸಂಗತಿ. ನೀವೇನಂತೀರಾ?
(ದಟ್ಸ್ ಕನ್ನಡ ವಾರ್ತೆ)