ನದಿಗಳ ಬೆಸೆಯದಿದ್ದರೆ ಭವಿಷ್ಯವಿಲ್ಲ -ಎನ್.ಮಹಾಲಿಂಗಂ
ಬೆಂಗಳೂರು : ದಕ್ಷಿಣ ಭಾರತದಲ್ಲಿನ ಪ್ರಮುಖ ನದಿಗಳ ಜೋಡಣೆ ಕಾರ್ಯ ಕ್ಕೆ ಚಾಲನೆ ನೀಡಬೇಕೆಂದು ಖ್ಯಾತ ಸಮಾಜ ಸೇವಕ, ಪದ್ಮಭೂಷಣ ಡಾ. ಎನ್. ಮಹಾಲಿಂಗಂ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಎಂ.ಜಿ.ರಸ್ತೆಯ ತಾಜ್ ಹೋಟೆಲ್ನಲ್ಲಿ ದಕ್ಷಿಣ ಭಾರತ ಸಕ್ಕರೆ ಉತ್ಪಾದಕರ ಒಕ್ಕೂಟ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಹಾಲಿಂಗಂ ಅವರು, ನದಿ ನೀರಿನ ಉಪಯುಕ್ತತೆ ಬಗ್ಗೆ ಹೇಳಿದರು.
ನದಿಗಳ ಜೋಡಣೆಯಿಂದ ಸಮುದ್ರಕ್ಕೆ ವ್ಯರ್ಥವಾಗಿ ಸೇರುವ ಜಲ ಸಂಪತ್ತನ್ನು ಉಳಿಸಿಕೊಳ್ಳಬಹುದು. ವ್ಯವಸಾಯ, ಜಲ ವಿದ್ಯುತ್ ಉತ್ಪಾದನೆ, ಕುಡಿಯುವ ನೀರಿನ ಯೋಜನೆಗಳಿಗೆ ಅಗತ್ಯವಾದ ರೀತಿಯಲ್ಲಿ ನದಿ ನೀರಿನ ಬಳಕೆ ಇದರಿಂದ ಸಾಧ್ಯವಾಗಲಿದೆ ಎಂದು ಮಹಾಲಿಂಗಂ ವಿವರಿಸಿದರು.
ನದಿಗಳ ಜೋಡಣೆ ಕಾರ್ಯಕ್ಕೆ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು 5.75 ಲಕ್ಷ ಕೋಟಿ ಮೀಸಲಿಟ್ಟಿದ್ದರು. ಈಗಿನ ಯುಪಿಎ ಸರ್ಕಾರದ ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾಪವಿದ್ದರೂ, ಕಾರ್ಯರೂಪಕ್ಕೆ ಬಂದಿಲ್ಲ.
ಕೇಂದ್ರ ಸರ್ಕಾರ ಕೂಡಲೇ 2 ಲಕ್ಷ ಕೋಟಿ ರೂ. ಒದಗಿಸಿ ದಕ್ಷಿಣ ಭಾರತದ ನದಿಗಳ ಜೋಡಣೆಗೆ ಮುಂದಾಗಬೇಕು ಎಂದು ಆಗ್ರಹ ಪಡಿಸಿರು.
ಬ್ರಹ್ಮಪುತ್ರ, ಗಂಗಾ, ಯಮುನಾ, ಮಹಾನದಿ, ಗೋದಾವರಿ, ಕೃಷ್ಣಾ, ನರ್ಮದಾ, ಪಾಲಾರ್ ಹಾಗೂ ಕಾವೇರಿ ನದಿಗಳನ್ನು ಜೋಡಿಸುವುದರಿಂದ ನದಿ ಹಂಚಿಕೆ ವಿವಾದದ ಜತೆಗೆ, ವಿದ್ಯುತ್ ವೈಫಲ್ಯ ಮುಂತಾದ ಅನೇಕ ಸಮಸ್ಯೆಗಳನ್ನು ದೂರಾಗಿಸಬಹುದು ಎಂದರು.
ಈ ಸಮಾರಂಭದಲ್ಲಿ ಕೇಂದ್ರ ಯೋಜನಾ ಮಂತ್ರಿ ಎಂ.ವಿ. ರಾಜಶೇಖರನ್, ಅದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ರಾಜ್ಯಪಾಲ ಟಿ.ಎನ್.ಚತುರ್ವೇದಿ, ಮತ್ತೂರು ಕೃಷ್ಣಮೂರ್ತಿ, ಪದ್ಮ ಭೂಷಣ ಎನ್.ಎಸ್ .ರಾಮಸ್ವಾಮಿ, ವಿ, ವೆಂಕಟ ರೆಡ್ಡಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
ಮಹಾಲಿಂಗಂ ಬಗ್ಗೆ ಇನ್ನಷ್ಟು : ಮಹಾಲಿಂಗಂ ಅವರು ತಮಿಳುನಾಡಿನ ಖ್ಯಾತ ಗಾಂಧಿವಾದಿ, ಉದ್ಯಮಿ(ಶಕ್ತಿ ಗ್ರೂಪ್ ಆಫ್ ಇಂಡಸ್ಟ್ರೀಸ್ ಮಾಲೀಕ), ಶಿಕ್ಷಣ ತಜ್ಞರಾಗಿದ್ದಾರೆ. ಇವರಿಗೆ ತಮಿಳುನಾಡಿನ ಅನೇಕ ವಿದ್ಯಾಸಂಸ್ಥೆಗಳ ಡಾಕ್ಟರೇಟ್ ಲಭಿಸಿದೆ. ಇಂದಿರಾಗಾಂಧಿ ರಾಷ್ಟ್ರೀಯ ಐಕ್ಯತಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಗಳಿಸಿದ್ದರೂ, ಪ್ರಶಸ್ತಿಗಳ ಮೇಲೆ ವ್ಯಾಮೋಹ ತಾಳದೆ ಗಾಂಧಿ ತತ್ವವನ್ನು ಎಲ್ಲೆಡೆ ಪ್ರತಿಪಾದಿಸುತ್ತಾ ಬಂದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)