ತಪ್ಪಿದ ತಲೆದಂಡ : ಖರ್ಗೆ ಮುಖದಲ್ಲಿ ಕಿರು ಮಂದಹಾಸ!
ಬೆಂಗಳೂರು : ಉಳ್ಳಾಲ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದರೇ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಇಕ್ಕಟ್ಟಿಗೆ ಸಿಲುಕುತ್ತಿದ್ದರು. ಅವರ ತಲೆದಂಡವನ್ನು ಪಕ್ಷದ ಹೈಕಮಾಂಡ್ ಕೇಳುತ್ತಿತ್ತು. ಖರ್ಗೆ ಜಾಗದಲ್ಲಿ ಸಿದ್ದರಾಮಯ್ಯ ಕೂರುತ್ತಿದ್ದರು ಎನ್ನುವ ವಾತಾವರಣ ಸದ್ಯಕ್ಕಿಲ್ಲ.
ಈಗಂತೂ ಖರ್ಗೆ ಖುಷಿಯಲ್ಲಿ ತೇಲುತ್ತಿದ್ದಾರೆ. ಮಂಗಳವಾರ ಸುದ್ದಿಗಾರರ ಜೊತೆ ತಮ್ಮ ಸಂತಸವನ್ನು ಅವರು ಹಂಚಿಕೊಂಡರು.
ಉಳ್ಳಾಲ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗುವ ಮೂಲಕ ಮತದಾರರು, ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ತಲುಪಿಸಿದ್ದಾರೆ. ದೋಸ್ತಿ ಸರ್ಕಾರವನ್ನು ಮತದಾರರು ತಿರಸ್ಕಾರ ಮಾಡಿದ್ದಾರೆ ಎಂದು ಖರ್ಗೆ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಬಗ್ಗೆ ಜನರಿಗಿರುವ ಒಲವು ಮತ್ತು ನಮ್ಮ ಪಕ್ಷದೊಳಗಿನ ಐಕ್ಯತೆ ಚುನಾವಣೆ ಮೂಲಕ ವ್ಯಕ್ತವಾಗಿದೆ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿಕೂಟದ 16ತಿಂಗಳ ಆಡಳಿತ ಜನರಿಗೆ ಇಷ್ಟವಾಗಿಲ್ಲ. ತಮ್ಮ ಅಸಮಾಧಾನವನ್ನು ಉಳ್ಳಾಲದಲ್ಲಿ ವ್ಯಕ್ತಪಡಿಸಿದ್ದಾರೆ. ಇಲ್ಲಿಗೆ ಪ್ರಚಾರಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಂದರೂ ಪ್ರಯೋಜನವಾಗಲಿಲ್ಲ. ಅವರ ಹುಸಿ ಭರವಸೆಗಳನ್ನು ಜನರು ನಂಬುವಷ್ಟು ದಡ್ಡರಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಾಜರಿದ್ದ ಪ್ರತಿಪಕ್ಷದ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ದೋಸ್ತಿ ಸರ್ಕಾರದ ನೀತಿಯನ್ನು ತರಾಟೆಗೆ ತೆಗೆದುಕೊಂಡರು.
(ದಟ್ಸ್ ಕನ್ನಡ ವಾರ್ತೆ)