ಹೈಕೋರ್ಟ್ ಆದೇಶ : ಕಂಗ್ಲಿಷ್ ಶಾಲೆಗಳಿಗೆ ಮತ್ತೆ ಹಿನ್ನಡೆ
ಬೆಂಗಳೂರು : ಭಾಷಾ ಮಾಧ್ಯಮ ನೀತಿ ಉಲ್ಲಂಘಿಸಿರುವ ಶಾಲೆಗಳು, ಪ್ರಸಕ್ತ ವರ್ಷದಲ್ಲಿ ಕನ್ನಡ ಮಾಧ್ಯಮದಲ್ಲೇ ವಿದ್ಯಾರ್ಥಿಗಳ ಪ್ರವೇಶ ಮಾಡಿಕೊಳ್ಳಬೇಕೆಂದು ಹೈಕೋರ್ಟ್ ಪುನಃ ತಾಕೀತು ಮಾಡಿದೆ.
ನ್ಯಾಯಮೂರ್ತಿ ರಾಮಮೋಹನರೆಡ್ಡಿ ಅವರನ್ನೊಳಗೊಂಡ ಏಕ ಸದಸ್ಯ ಪೀಠ, ಈ ಕುರಿತ ಆದೇಶ ಪರಿಷ್ಕರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ಬುಧವಾರ(ಮೇ 30) ತಳ್ಳಿ ಹಾಕಿತು. ಅಲ್ಲದೆ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂಬ ಬಗ್ಗೆ ಜೂನ್ 1ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.
ಹೈಕೋರ್ಟ್ನ ಈ ಆದೇಶದಿಂದ, ಸರ್ಕಾರದ ವಿರುದ್ಧ ಕದನಕ್ಕಿಳಿದಿದ್ದ ಶಾಲೆಗಳಿಗೆ ಹಿನ್ನಡೆಯುಂಟಾದಂತಾಗಿದೆ.
ಹಿನ್ನೆಲೆ : ಇತ್ತೀಚೆಗಷ್ಟೇ ನ್ಯಾಯಮೂರ್ತಿ ಎ.ಸಿ.ಕಬ್ಬಿನ್ ನೇತೃತ್ವದ ಪೀಠ, ಯಾವ ಮಾಧ್ಯಮಕ್ಕೆ ಅನುಮತಿ ಪಡೆಯಲಾಗಿತ್ತೋ ಅದೇ ಮಾಧ್ಯಮದಲ್ಲಿ ಪ್ರಸಕ್ತ ವರ್ಷ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳಬೇಕು. ಶಾಲೆಗಳ ಸೂಚನಾ ಫಲಕಗಳಲ್ಲಿ ಇದನ್ನು ನಮೂದಿಸಬೇಕು ಎಂದು ಆದೇಶ ನೀಡಿತ್ತು. ಈ ಆದೇಶ ಪರಿಷ್ಕರಿಸುವಂತೆ ಶಾಲಾ ಆಡಳಿತ ಮಂಡಳಿಗಳು ಮಧ್ಯಂತರ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
(ದಟ್ಸ್ ಕನ್ನಡ ವಾರ್ತೆ)