ಗ್ರಾಮೀಣ ಪತ್ರಕರ್ತರಿಗೆ ಇನ್ಮುಂದೆ ಉಚಿತ ಬಸ್ ಪಾಸ್?
ಬೀದರ್ : ಗ್ರಾಮೀಣ ಭಾಗದಲ್ಲಿ ಸಂಚರಿಸುವ ಪತ್ರಕರ್ತರಿಗೆ ಸರ್ಕಾರ ಉಚಿತವಾಗಿ ಬಸ್ ಪಾಸ್ ನೀಡಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕ ವೃತ್ತಿನಿರತ ಪತ್ರಕರ್ತರ ರಾಜ್ಯ ಮಟ್ಟದ 28ನೇ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲ ರಾಜ್ಯಗಳಲ್ಲಿ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದು ಉತ್ತಮ ಬೆಳವಣಿಗೆ ಇದರಿಂದ ಗ್ರಾಮೀಣ ಭಾಗದ ಬಡವರ ಹಾಗೂ ಶೋಷಿತರ ಕುಂದು-ಕೊರತೆಗಳ ಮೇಲೆ ಬೆಳಕು ಚೆಲ್ಲಲು ಸಹಕಾರಿಯಾಗುತ್ತದೆ ಎಂದರು.
ಇದೇ ಸಮಾರಂಭದಲ್ಲಿ ಬೀದರ್ ಜಿಲ್ಲೆಯ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿದರು. ಹನುಮಂತಪ್ಪ ಪಾಟೀಲ್ ಹಾಗೂ ಗಂಧರ್ವ ಸೇನರವರಿಗೆ ‘ವರ್ಷದ ಉತ್ತಮ ಪತ್ರಕರ್ತ’ ಎಂದು ಗೌರವಿಸಲಾಯಿತು. ವೃತ್ತಿನಿರತ ಪತ್ರಕರ್ತಸಂಘಕ್ಕೆ ನಿವೇಶನವನ್ನು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಮಂಜೂರು ಮಾಡಿದರು.
ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಕೃಷಿ ಸಚಿವ ಬಂಡೆಪ್ಪ ಕಾಶೆಂಪುರ್, ವೃತ್ತಿನಿರತ ಪತ್ರಕರ್ತರ ಜಿಲ್ಲಾ ಘಟಕದ ಅಧ್ಯಕ್ಷ ವಿ. ವೆಂಕಟೇಶ್ ಮುಂತಾದವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)