‘ಬಿಜೆಪಿ ಪಕ್ಷದ ಪೋಸ್ಟರ್ನಿಂದ ಹಿಂದೂಗಳಿಗೆ ಅಪಚಾರ’
ಜೋಧ್ಪುರ್ : ಪೋಸ್ಟರ್ಗಳಲ್ಲಿ ಹಿಂದೂ ದೇವರುಗಳಿಗೆ ಅವಮಾನವೆಸಗಿದ ಬಿಜೆಪಿ ಶಾಸಕರೊಬ್ಬರ ವಿರುದ್ಧ, ಅದೇ ಪಕ್ಷದ ಹಿರಿಯ ನಾಯಕ ಜಸ್ವಂತ್ ಸಿಂಗ್ ಪತ್ನಿ ದೂರು ಸಲ್ಲಿಸಿದ್ದಾರೆ.
ರಾಜಸ್ಥಾನದಲ್ಲಿ ಬಿಜೆಪಿ 3ವರ್ಷದ ಆಡಳಿತ ಪೂರ್ಣಗೊಳಿಸಿದ ಸಂದರ್ಭದಲ್ಲಿ ಪ್ರಕಟಿಸಲಾಗಿದ್ದ ಪೋಸ್ಟರ್ ಬಗ್ಗೆ, ಜಸ್ವಂತ್ ಸಿಂಗ್ ಪತ್ನಿ ಶೀತಲ ಕುಮಾರ್ಗೆ ಅಸಮಾಧಾನ ಉಂಟಾಗಿದೆ.
ಪೋಸ್ಟರ್ನಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರಂತೆ ವಾಜಪೇಯಿ, ಅಡ್ವಾಣಿ ಮತ್ತು ರಾಜನಾಥ್ ಸಿಂಗ್ರನ್ನು ಚಿತ್ರಿಸಲಾಗಿತ್ತು. ಅಲ್ಲದೇ ಮುಖ್ಯಮಂತ್ರಿ ವಸುಂಧರೆ ರಾಜೇ ಅವರನ್ನು ಅನ್ನಪೂರ್ಣೇಶ್ವರಿಯಂತೆ ಬಿಂಬಿಸಲಾಗಿತ್ತು. ಈ ಮೂಲಕ ಹಿಂದೂಗಳ ನಂಬಿಕೆಗಳಿಗೆ ಅಪಚಾರ ಮಾಡಲಾಗಿದೆ ಎಂಬುದು ಜಸ್ವಂತ್ ಸಿಂಗ್ ಪತ್ನಿ ಆರೋಪ.
ಈ ವಿವಾದಾತ್ಮಕ ಪೋಸ್ಟರ್ ಮುದ್ರಕರು ಮತ್ತು ಬಿಡುಗಡೆ ಮಾಡಿದ ಶಾಸಕ ಸೂರ್ಯಕಾಂತ್ ವ್ಯಾಸ್ ವಿರುದ್ಧ ಅವರು ದೂರು ಸಲ್ಲಿಸಿದ್ದಾರೆ. ಆದರೆ ಈ ದೂರನ್ನು ದಾಖಲಿಸಿಕೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸದಸ್ಯರೊಬ್ಬರು ತಿಂಗಳ ಹಿಂದೆಯೇ ದೂರು ಸಲ್ಲಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ.
(ಏಜನ್ಸೀಸ್)