ಗುವಾಹಟಿಯಲ್ಲಿ ಬಾಂಬ್ ಸ್ಫೋಟ : ಏಳು ಮಂದಿ ಸಾವು
ಗುವಾಹಟಿ : ನಗರದ ಅಥ್ಗಾಂವ್ ಪ್ರದೇಶದಲ್ಲಿ ಉಲ್ಫಾ ಉಗ್ರರು ಶನಿವಾರ ನಡೆಸಿದ ದಾಳಿಯಲ್ಲಿ, ಏಳು ಜನರು ಮೃತಪಟ್ಟು 30 ಜನ ಗಾಯಗೊಂಡಿದ್ದಾರೆ.
ಅಸ್ಸೋಮ್ ಮುಖ್ಯಮಂತ್ರಿ ತರುಣ್ ಗೋಗಯ್ಇತ್ತೀಚೆಗಷ್ಟೇ ಒಂದು ವರ್ಷದ ಆಡಳಿತವನ್ನು ಪೂರೈಸಿದರು. ಈ ಬೆನ್ನಲ್ಲಿಯೇ ಬಾಂಬ್ ಸ್ಫೋಟ ನಡೆದಿದೆ.
ನಗರದ ವರಿಷ್ಠ ಪೊಲೀಸ್ ಅಧಿಕಾರಿ ಎಸ್.ಎನ್.ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಿಕ್ಷಾವೊಂದರಲ್ಲಿ ಇಟ್ಟಿದ್ದ ಬಾಂಬ್ ಬೆಳಗ್ಗೆ ಸುಮಾರು 10.45 ಗಂಟೆಗೆ ಸ್ಫೋಟಗೊಂಡಿದೆ. ಮರ್ವಾರಿ ಮ್ಯಾಟರ್ನಿಟಿ ಆಸ್ಪತ್ರೆ ಬಳಿ ಸ್ಫೋಟ ಸಂಭವಿಸಿದೆ ಎಂದು ವಿವರಿಸಿದರು.
ಮೃತರ ಪೈಕಿ ಕೆಲವರು ಸ್ಥಳದಲ್ಲೇ ಅಸುನೀಗಿದರೆ, ಇನ್ನು ಕೆಲವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರಿಂದ ಗಾಯಾಳುಗಳನ್ನು ರಕ್ಷಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಜನರು ಸ್ಥಳ ತೊರೆಯಲು ಯತ್ನಿಸಿದ್ದು, ಪ್ರದೇಶದಲ್ಲಿ ಗೊಂದಲ-ಅವ್ಯವಸ್ಥೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಜನರು ಅಥ್ಗಾಂವ್, ಫ್ಯಾನ್ಸಿ ಬಜಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದರು. ಬೀದಿಗಿಳಿದ ಜನರು ಪ್ರದೇಶದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಬಾಂಬ್ ದಾಳಿ ಖಂಡಿಸಿದರು.
ಕೇಂದ್ರದಿಂದ ಹೆಚ್ಚುವರಿ ರವಾನೆ : ಸುದ್ದಿ ತಿಳಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರ ಹೆಚ್ಚುವರಿ ಅರೆಸೇನಾ ತುಕಡಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ. ಗೃಹಸಚಿವ ಶಿವರಾಜ್ ಪಾಟೀಲ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಟ್ಟೆಚ್ಚರ ವಹಿಸಬೇಕೆಂದು, ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
(ಯುಎನ್ಐ)