ಮಕ್ಕಳಿಗಾಗಿ ಪ್ರತ್ಯೇಕ ಅಕಾಡೆಮಿ ಸ್ಥಾಪನೆ : ಸಚಿವ ಶೆಟ್ಟರ್
ಹುಬ್ಬಳ್ಳಿ : ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ, ಮಕ್ಕಳಿಗಾಗಿ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಲು ನಿರ್ಧರಿಸಲಾಗುವುದು ಎಂದು ಕಂದಾಯ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.
5ನೇ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತ ಅವರು ಈ ವಿಷಯ ಬಹಿರಂಗಪಡಿಸಿದರು.
ಇಂತಹ ಸಮ್ಮೇಳನಗಳು ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಸಹಾಯ ಮಾಡುತ್ತವೆ. ಆದರೆ ಮಕ್ಕಳ ಏಕಾಗ್ರತೆ ಭಂಗವಾಗಲು ಟೆಲಿವಿಷನ್(ಟಿವಿ) ಹೊಣೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಮಾತನಾಡಿ, ನಾನು ಎಂದೂ ಶಾಲೆಗೆ ಹೋಗಲಿಲ್ಲ. ಆದರೆ ಈಗ ಮಕ್ಕಳ ಜೊತೆ ಒಂದಾಗಿರುವುದು ಸಂತಸವುಂಟುಮಾಡಿದೆ ಎಂದರು.
ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಮಾತನಾಡಿ, ಮಕ್ಕಳ ಸಾಹಿತ್ಯವನ್ನು ನಿರ್ಲಕ್ಷಿಸಲಾಗಿದೆ. ಮಕ್ಕಳು ಓದಿ ಆನಂದಿಸಲು ದೇಶದಲ್ಲಿ ಉತ್ತಮ ಪುಸ್ತಕಗಳು ಬರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಹಿರಿಯ ಕವಿ ಚೆನ್ನವೀರ ಕಣವಿ ಮಾತನಾಡುತ್ತಾ, ಒಂದನೇ ತರಗತಿಯಿಂದ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಪರಿಚಯಿಸುವ ಸರ್ಕಾರದ ನಿರ್ಧಾರವನ್ನು ಟೀಕಿಸಿದರು.
(ಯುಎನ್ಐ)