ಶಿವರಾತ್ರೀಶ್ವರ ಪೀಠದಿಂದ ಮಾರಿಷಸ್ನಲ್ಲಿ ಅಕ್ಷರ ಬೆಳಕು
ಮೈಸೂರು : ಜಗದ್ಗುರು ಶ್ರೀ ಶಿವರಾತ್ರೀಶ್ವರ(ಜೆಎಸ್ಎಸ್) ಮಹಾವಿದ್ಯಾಪೀಠ ಮೇ 26ರಂದು ಮಾರಿಷಸ್ನಲ್ಲಿ ತಾಂತ್ರಿಕ ಶಿಕ್ಷಣ ಅಕಾಡೆಮಿ ಆರಂಭಿಸಲಿದೆ.
ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ನಿರ್ದೇಶಕ ಪ್ರೊ.ಎಂ.ಎಚ್.ಧನಂಜಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮೇ 26ರಂದು ಮಾರಿಷಸ್ ಪ್ರಧಾನಮಂತ್ರಿ ಡಾ.ನವೀನ್ಚಂದ್ರ ರಾಮ್ಗುಲಂ ಕ್ಯಾಂಪಸ್ನ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದರು.
ಅಕಾಡೆಮಿ, ಮಾಹಿತಿ-ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳಲ್ಲಿ ಇಂಜಿನೀಯರಿಂಗ್ ಪದವಿ(ಬ್ಯಾಚುಲರ್ ಆಫ್ ಇಂಜಿನೀಯರಿಂಗ್) ಶಿಕ್ಷಣ ನೀಡಲಿದೆ. ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠ, ರಾಜ್ಯ ಹಾಗೂ ದೇಶದ ವಿವಿಧೆಡೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಕೀರ್ತಿ ಹೊಂದಿದೆ. ಇದೀಗ ಹೊರದೇಶದಲ್ಲಿ ತನ್ನ ಶಾಖೆ ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದರು.
ಕರ್ನಾಟಕದ ಸಚಿವರುಗಳಾದ ಡಿ.ಎಚ್.ಶಂಕರಮೂರ್ತಿ, ಎಚ್.ಡಿ.ರೇವಣ್ಣ, ಆರ್.ಅಶೋಕ್, ಕಟ್ಟಾ ಸುಬ್ರಮಣ್ಯ ನಾಯ್ಡು, ಮಾರಿಷಸ್ನ ಶಿಕ್ಷಣ ಸಚಿವ ಧರ್ಮವೀರ್ ಗೋಕುಲ್, ಪರಿಸರ ಸಚಿವ ಅನಿಲ್ಕುಮಾರ್ ಬೈಚೋ ಮತ್ತು ಮಾರಿಷಸ್ನಲ್ಲಿ ಭಾರತದ ಹೈಕಮೀಷನರ್ ಆಗಿರುವ ಬಿ.ಜಯಶಂಕರ್ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಸ್ಥೆ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ, ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ 7.5 ಎಕರೆ ಭೂಮಿಯನ್ನು ಖರೀದಿಸಿದೆ. 17ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ನಡೆಯಲಿದೆ ಎಂದು ಧನಂಜಯ ವಿವರಿಸಿದರು.
(ಯುಎನ್ಐ)