ಸಂಸತ್ತು ಕುರಿತು ಚಿಂತನೆ : ಬಿ.ಎಲ್.ಶಂಕರ್ಗೆ ಡಾಕ್ಟರೇಟ್
ಬೆಂಗಳೂರು : ಮಾಜಿ ಸಂಸದ, ವಿಧಾನಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅವರಿಗೆ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಲಭಿಸಿದೆ.
‘ಭಾರತೀಯ ಸಂಸತ್ತು : ಇದರ ಬದಲಾವಣೆಯ ರೂಪುರೇಷೆ’ ಎಂಬ ವಿಷಯವಾಗಿ ಮಂಡಿಸಿದ ಪ್ರಬಂಧಕ್ಕೆ ಪಿಎಚ್ಡಿ ಪದವಿ ಸಿಕ್ಕಿದೆ.
ಸಂಸತ್ತಿನ ನಿರ್ಮಾಣ, ಲೋಕಸಭೆಯಲ್ಲಿ ಸಾಮಾಜಿಕ ಸಂಯೋಜನೆಯಲ್ಲಿನ ರೂಪಾಂತರ, ಪ್ರತಿನಿಧಿತ್ವದ ಕಲ್ಪನೆಯಲ್ಲಿ ಆಗುತ್ತಿರುವ ಬದಲಾವಣೆ, ಸಂವಾದದ ವಿಧಾನಗಳ ರೂಪಾಂತರ, ಆಂಗ್ಲ ಭಾಷೆಯಿಂದ ಪ್ರಾದೇಶಿಕ ಭಾಷೆಗಳೆಡೆಗಿನ ಪರಿವರ್ತನೆ, ರಾಷ್ಟ್ರೀಯ ಸಿದ್ಧಾಂತದಿಂದ ಬಹು ಸಿದ್ಧಾಂತದೆಡೆಗಿನ ಸ್ಥಿತ್ಯಂತರ -ಹೀಗೆ ಶಂಕರ್ ಅವರ ಪ್ರಬಂಧದಲ್ಲಿ ಐದು ಪ್ರಮುಖ ಅಧ್ಯಾಯಗಳಿವೆ.
ಪ್ರಥಮ ಲೋಕಸಭೆಯಿಂದ 14ನೇ ಲೋಕಸಭೆವರೆಗಿನ ಕಲಾಪಗಳ ಕೂಲಂಕುಷ ಹಾಗೂ ವಿಮರ್ಶಾತ್ಮಕ ಅಧ್ಯಯನ ಮಾಡಲು ಪ್ರಬಂಧ ಸಹಕಾರಿಯಾಗಲಿದೆ. ಕುಸಿಯುತ್ತಿರುವ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಪ್ರಾದೇಶಿಕ ಅಸಮತೋಲನ ಇನ್ನಿತರ ವಿಷಯಗಳ ಮೇಲೆ ವಿವಿಧ ಗಣ್ಯರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಾಫಿ ಪ್ಲಾಂಟರ್ ಆಗಿರುವ ಬಿ.ಎಲ್. ಶಂಕರ್, ಬಿಎಸ್ಸಿ ಪದವಿ ಜತೆಗೆ ಕಾನೂನು ಪದವಿಯನ್ನು ಪಡೆದಿದ್ದಾರೆ. ಅಲ್ಲದೆ ರಾಜಕೀಯ ಶಾಸ್ತ್ರದಲ್ಲಿ ಎಂ ಎ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)