ಐಎಎಸ್ ಪರೀಕ್ಷೆ : ಬಡ ದಲಿತ ಯುವಕನಿಗೆ ಫಸ್ಟ್ ರ್ಯಾಂಕ್
ಬೆಂಗಳೂರು : ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ಸಿ)ನಲ್ಲಿ ವ್ಯಾಸಂಗ ಮಾಡಿದ ದಲಿತ ವಿದ್ಯಾರ್ಥಿ ಮುತ್ಯಾಲರಾಜು, 2006ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಐಐಎಸ್ಸಿಯಲ್ಲಿ ಎಲೆಕ್ಟ್ರಾನಿಕ್ಸ್ ವಿಷಯದ ಮೇಲೆ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಮುತ್ಯಾಲ ರಾಜು, ಮೂಲತಃ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯವರು. ‘ನಾನು ಸಾಮಾನ್ಯ ಹಳ್ಳಿಯಿಂದ ಬಂದವನು, ನನಗೆ ಭಾರತದ ಹಳ್ಳಿಗಳ ಮೂಲಭೂತ ಸುಧಾರಣೆ ಮಾಡಬೇಕೆಂಬ ಆಸೆಯಿದೆ’ ಎನ್ನುತ್ತಾರೆ ಮುತ್ಯಾಲ ರಾಜು.
ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ಈ ಪರೀಕ್ಷೆಯನ್ನು ಸುಮಾರು 2 ಲಕ್ಷ ಮಂದಿ ತೆಗೆದುಕೊಂಡಿದ್ದರು. ಅವರಲ್ಲಿ 474 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. 27 ವರ್ಷದ ದಲಿತ ಯುವಕ ಮುತ್ಯಾಲ ರಾಜು ಸುಮಾರು 473 ಜನರನ್ನು ಹಿಂದಿಕ್ಕಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಅಯ್ಕೆ ಆದವರಲ್ಲಿ 373 ಮಂದಿ ಪುರುಷರು ಹಾಗೂ 101 ಮಂದಿ ಮಹಿಳೆಯರು ಇದ್ದಾರೆ. ಸಾಮಾನ್ಯ ವರ್ಗಕ್ಕೆ ಸೇರಿದ 214 ಜನ ಹಾಗೂ 144 ಜನ ಅಭ್ಯರ್ಥಿಗಳಿದ್ದಾರೆ.
ಕರ್ನಾಟಕದ ರ್ಯಾಂಕ್ ವಿಜೇತರು:
ಕರ್ನಾಟಕದ 17 ಮಂದಿ ಯುಪಿಎಸ್ಪಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಬಸವರಾಜ್ -40(ಚಿತ್ರದುರ್ಗ), ಕೆ.ಜಿ. ದಿವ್ಯಾ -173(ಚಿತ್ರದುರ್ಗ), ಪ್ರದೀಪ್-194 (ಮೈಸೂರು), ಸುಭಾಷ್-202, ಸತ್ಯಜಿತ್ಮಹಾಪಾತ್ರ -291, ಯಮುನಾ-303, ರಾಜಶೇಖರ್-334(ಬೆಂಗಳೂರು), ಮುರಳಿ ಮೋಹನ್-340, ಶಿವಾನಂದ ಎಚ್ .ಕಲ್ಕರೆ-347(ಬಿಜಾಪುರ), ಬಿ. ಕಿರಣ್-359, ಡಾ. ನರೇಂದ್ರ ನಾಯಕ್ -360(ಬಳ್ಳಾರಿ) ಆಯ್ಕೆ ಆದವರು.
ಈ ಅಭ್ಯರ್ಥಿಗಳು ಐಎಸ್, ಐಎಫ್ಎಸ್,ಐಪಿಎಸ್ ಹಾಗೂ ಕೇಂದ್ರ ಸಾರ್ವಜನಿಕ ಸೇವೆಗಳ ಗುಂಪು ಎ ಮತ್ತ ಬಿ ಶ್ರೇಣಿಯ ಹುದ್ದೆಗಳನ್ನು ಪಡೆಯಬಹುದಾಗಿದೆ.
(ಏಜನ್ಸೀಸ್)