ಗಂಭೀರ್ ಅಮೋಘ ಆಟ, ಭಾರತಕ್ಕೆ ಸರಣಿ ಜಯ
ಮೀರಾಪುರ್: ಆರಂಭಿಕ ಆಟಗಾರ ಗೌತಮ್ ಗಂಭೀರ್ ಹಾಗೂ ಚೊಚ್ಚಲ ಪಂದ್ಯವಾಡಿದ ಸ್ಪಿನ್ನರ್ ಪಿಯೂಶ್ ಚಾವ್ಲಾರ ಶಿಸ್ತಿನ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತ ತಂಡ ಎರಡನೇ ಏಕದಿನ ಕ್ರಿಕೆಟ್ ಪಂದ್ಯ ಹಾಗೂ ಕ್ರಿಕೆಟ್ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಶೇರ್-ಎ- ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಶನಿವಾರ (ಮೇ 12)ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲು ಸವಾಲೊಡ್ಡಿದ್ದ 285 ರನ್ಗಳಿಗೆ ಉತ್ತರವಾಗಿ ಆತಿಥೇಯರು 49 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 238 ರನ್ಗಳಿಸಿ ಸೋಲೊಪ್ಪಿಕೊಂಡರು.
ಈ ಗೆಲುವಿನೊಂದಿಗೆ ರಾಹುಲ್ ದ್ರಾವಿಡ್ ಪಡೆ 15 ತಿಂಗಳು ನಂತರ (ಪಾಕ್ ವಿರುದ್ಧ ಫೆಬ್ರವರಿ 2006ರ ಬಳಿಕ) ಭಾರತ ವಿದೇಶಿ ನೆಲದಲ್ಲಿ ಏಕದಿನ ಸರಣಿ ಗೆದ್ದ ಗೌರವಕ್ಕೂ ಪಾತ್ರವಾಯಿತು. ಮೂರನೇ ಏಕದಿನ ಪಂದ್ಯ ಚಿತ್ತಗಾಂಗ್ನಲ್ಲಿ ಮೇ 15ರಂದು ನಡೆಯಲಿದೆ.
ಬಾಂಗ್ಲಾ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಮೊರ್ತಜಾ ಕೇವಲ 22 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ಗಳನ್ನು ಒಳಗೊಂಡಿದ್ದ 42 ರನ್ ಚಚ್ಚಿದರು. ಇದರಲ್ಲಿ ದಿನೇಶ್ ಮೊಂಗಿಯಾ ಅವರ ಓವರ್ನಲ್ಲಿ ಸತತವಾಗಿ ನಾಲ್ಕು ಸಿಕ್ಸರ್ಗಳು ಸೇರಿವೆ. ಭಾರತದ ಪರ ಮೊದಲ ಪಂದ್ಯವಾಡಿದ ಉತ್ತರಪ್ರದೇಶದ ಲೆಗ್ಸ್ಪಿನ್ನರ್ ಪಿಯೂಶ್ ಚಾವ್ಲಾ 37 ರನ್ ನೀಡಿ 3 ವಿಕೆಟ್ ಉರುಳಿಸಿ ಭಾರತ ತಂಡದ ಗೆಲುವಿಗೆ ನೆರವಾದರು. ಜಹೀರ್ ಖಾನ್ ಮತ್ತು ಯುವರಾಜ್ ಸಿಂಗ್ ತಲಾ ಎರಡು ವಿಕೆಟ್ ಪಡೆದರು.
ಗಂಭೀರ್ ಅಮೋಘ ಶತಕ: ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ ತಂಡ ನಿಗದಿತ 49 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 284 ರನ್ಗಳ ಉತ್ತಮ ಮೊತ್ತ ಸಂಪಾದಿಸಿತು.
ಆರಂಭಿಕ ಗೌತಮ್ ಗಂಭೀರ್ ಅಮೋಘ ಶತಕ ಬಾರಿಸಿ ಭಾರತಕ್ಕೆ ಆಸರೆಯಾದರೆ, ನಾಯಕ ರಾಹುಲ್ ದ್ರಾವಿಡ್ (42) ಮತ್ತು ಮಹೇಂದ್ರ ಸಿಂಗ್ ಧೋನಿ (36 ರನ್) ಉಪಯುಕ್ತ ಕಾಣಿಕೆ ನೀಡುವ ಮೂಲಕ ತಂಡದ ಮೊತ್ತ ಹಿಗ್ಗಲು ಕಾರಣರಾದರು.
ಗಂಭೀರ್ 113 ಎಸೆತಗಳಲ್ಲಿ 11 ಬೌಂಡರಿ ಹೊಂದಿದ್ದ 101 ರನ್ಗಳಿಸಿ ಔಟಾದರು. ಇದು ಅವರಿಗೆ ಎರಡನೇ ಏಕದಿನ ಶತಕವಾಗಿದೆ. ಯುವರಾಜ್ ಸಿಂಗ್ ಕೇವಲ 22 ಎಸೆತಗಳಲ್ಲಿ ತಲಾ ಎರಡು ಸಿಕ್ಸರ್ ಮತ್ತು ಬೌಂಡರಿ ಸೇರಿದಂತೆ 24 ರನ್ ಚಚ್ಚಿದರು.
ಬಾಂಗ್ಲಾ ಪರ ಉತ್ತಮ ದಾಳಿ ನಡೆಸಿದ ಮೊಹಮದ್ ರಫೀಕ್ 59 ರನ್ ನೀಡಿ 3 ವಿಕೆಟ್ ಉರುಳಿಸಿದರೆ, ಸೈಯದ್ ರಸೆಲ್ ಮತ್ತು ಅಬ್ದುಲ್ ರಜಾಕ್ ತಲಾ 2 ವಿಕೆಟ್ ಪಡೆದರು. ಬೆಳಗಿನ ತುಂತುರು ಮಳೆಯ ಕಾರಣ ಪಂದ್ಯ ಅರ್ಧಗಂಟೆ ತಡವಾಗಿ ಆರಂಭಗೊಂಡ ಹಿನ್ನೆಲೆಯಲ್ಲಿ ಒಂದು ಓವರ್ ಕಡಿತ ಮಾಡಲಾಯಿತು.
(ಏಜನ್ಸೀಸ್)