ಮೈಸೂರು ವಿವಿ ಕುಲಪತಿ ಮೇಲೆ ಗೂಬೆ ಕೂರಿಸಿದ ಸಿಎಂ!
ಬೆಂಗಳೂರು : ಮೈಸೂರು ಮುಕ್ತ ವಿ.ವಿ.ಯಲ್ಲಿ ತಾವು ವರ್ತಿಸಿದ ಬಗೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಆ ಪರಿಸ್ಥಿತಿಯಲ್ಲಿ ನನ್ನ ವರ್ತನೆ ಸಹಜವಾಗಿತ್ತು. ಜೊತೆಗೆ ಅನಿವಾರ್ಯವಾಗಿತ್ತು. ನನ್ನ ಮಾತಿಗೆ ವೀಸಿ ಬೆಲೆ ನೀಡುವುದಿಲ್ಲ ಎಂದರೆ ಏನರ್ಥ? ನನಗಿಂತಲೂ ವೀಸಿ ಸೂಪರ್ ಪವರ್ರಾ? ಎಂದು ಪ್ರಶ್ನಿಸಿದರು.
ಒಂದು ವರ್ಷದಿಂದಲೂ ಕೆಲಸವಿಲ್ಲದೇ, ನೂರಾರು ನೌಕರರ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ತಲುಪಿತ್ತು. ಅವರನ್ನು ಮಾನವೀಯ ದೃಷ್ಟಿಯಿಂದ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಿ ಎಂಬ ನನ್ನ ಮಾತನ್ನು ಕೇಳುವ ಸಹನೆಯನ್ನು ವೀಸಿ ತೋರಿಸಲಿಲ್ಲ. ಈ ಸಂದರ್ಭದಲ್ಲಿ ತುಸು ಖಾರವಾಗಿ ಮಾತನಾಡಬೇಕಾಯಿತು ಎಂದು ಹೇಳಿದರು.
ರಾಜ್ಯಪಾಲರಿಗೆ ದೂರು : ಮುಖ್ಯಮಂತ್ರಿಗಳ ವರ್ತನೆಯಿಂದ ಬೇಸತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲದ ಕುಲಪತಿ ಕೆ. ಸುಧಾರಾವ್, ರಾಜ್ಯಪಾಲರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಘಟನೆಯ ವಿವರ ನೀಡಲು ಅವರು ಮುಂದಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)