ಮೇ11,12 ತೀವ್ರ‘ಬರ’ದ ದಿನಗಳು! ನೋಡಿ ಅನುಭವಿಸಿ!
ಬೆಂಗಳೂರು : ಬರ -ಈ ಪದವೇ ಎಷ್ಟೊಂದು ಭಯಾನಕ! ಬರದ ನಾಡಿನಲ್ಲಿ ಬೇಯದ ಜೀವಗಳಿಗೆ ಬರ ಅರ್ಥವಾಗುವುದಿಲ್ಲ! ಅರ್ಥವಾಗಲು, ಇದು 2ಗಂಟೆಯ ಎಂ.ಎಸ್.ಸತ್ಯು ನಿರ್ದೇಶನದ ‘ಬರ’ ಸಿನಿಮಾ ಅಲ್ಲ! ಬರದ ತೀವ್ರತೆಯನ್ನು ಕಣ್ಮುಂದೆ ಕಟ್ಟಿ ಕೊಡಲು ಛಾಯಾಗ್ರಾಹಕ ಎಸ್.ಕೆ.ಮೋಹನ್ ಪ್ರಯತ್ನಿಸಿದ್ದಾರೆ.
ಬರದ ನಾಡಿನ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ತುಂಬಿಕೊಂಡು, ಆ ತಲ್ಲಣವನ್ನು ಹಂಚಿಕೊಳ್ಳಲು ಅವರೀಗ ಮುಂದಾಗಿದ್ದಾರೆ.
ತಮ್ಮ ಕ್ಯಾಮೆರಾದೊಳಗಿನ ಬೇಗುದಿಯನ್ನು ಸಮಾಜಕ್ಕೆ ಹಂಚುವ ಕಾತರ ಅವರದು. ಇದೇ ಮೇ.11 ಮತ್ತು 12ರಂದು ನಗರದ ಚಿತ್ರಕಲಾ ಪರಿಷತ್ತಿನಲ್ಲಿ ‘ಬರಗಾಲದ ನಡುವೆ ಬರಿಗಣ್ಣ ನೋಟ’ ಎಂಬ ಹೆಸರಿನಲ್ಲಿ ಬರದ ಚಿತ್ರಗಳನ್ನು ಅವರು ಪ್ರದರ್ಶಿಸಲಿದ್ದಾರೆ.
ಬೆಳಗ್ಗೆ 10.30ರಿಂದ 5.30ರವರೆಗೆ ನಿಮಗೆ ಯಾವಾಗ ಬಿಡುವು ಸಿಗುವುದೋ ಆವಾಗ, ಪ್ರದರ್ಶನ ವೀಕ್ಷಿಸಬಹುದು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರದರ್ಶನ ಉದ್ಘಾಟಿಸುವರು. ಮಾಜಿ ಕಾನೂನು ಸಚಿವ ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆವಹಿಸುವರು. ಎನ್.ಧರ್ಮಸಿಂಗ್, ಕಟ್ಟಾ ಸುಬ್ರಹ್ಮಣ್ಯ ನಾಯ್ದು, ಆರ್.ಅಶೋಕ್ ಈ ಸಂದರ್ಭದಲ್ಲಿ ಹಾಜರಿರುತ್ತಾರೆ.
ಜಗತ್ತಿನಲ್ಲಿ ಐಶ್ವರ್ಯ ರೈ, ಸಾನಿಯಾ, ಸಚಿನ್, ದ್ರಾವಿಡ್, ಮುಂಗಾರು ಮಳೆ, ಪ್ರೀತಿ-ಪ್ರೇಮಗಳ ಮಧ್ಯೆ, ಇಂತಹ ಲೋಕವೂ ಇದೆ ಸ್ವಾಮಿ.. ಸ್ವಲ್ಪ ಒಳಗಣ್ಣು ತೆರೆಯಿರಿ..
(ದಟ್ಸ್ ಕನ್ನಡ ವಾರ್ತೆ)