ಮೈಸೂರು ವಿ.ವಿ. : ಸಿ.ಎಂ ಮತ್ತು ಶಾಸಕರ ದಾದಾಗಿರಿ!
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿನ ಮುಖ್ಯಮಂತ್ರಿಗಳ ವರ್ತನೆ, ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗ್ರಾಸವಾಗಿದೆ.
ಈ ಮಧ್ಯೆ ಚಾಮರಾಜನಗರದ ಶಾಸಕ ಎಚ್.ಎಸ್.ಶಂಕರಲಿಂಗೇಗೌಡ, ವಿ.ವಿ.ಯಲ್ಲಿನ ರಿಜಿಸ್ಟ್ರಾರ್ ಕಚೇರಿಗೆ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಂಗಾಮಿ ನೌಕರರು ಕರ್ತವ್ಯ ಮಾಡಲು ಅವಕಾಶ ಕಲ್ಪಿಸಬೇಕು ಎಂದು ರಿಜಿಸ್ಟ್ರಾರ್ ಅವರನ್ನು ಕೇಳಿದ ಶಾಸಕರು, ಕೊನೆಗೆ ‘ನಿಮ್ಮ ನಿಮ್ಮ ಕುರ್ಚಿಯಲ್ಲಿ ಕೂತು ಕೆಲಸ ಮಾಡಿ’ ಎಂದು ಹಂಗಾಮಿ ನೌಕರರಿಗೆ ಸೂಚನೆ ನೀಡಿದರು. ಮುಖ್ಯಮಂತ್ರಿ ಮತ್ತು ಶಾಸಕರ ಬಲವನ್ನು ನಂಬಿಕೊಂಡು, ಹಂಗಾಮಿ ನೌಕರರು ಕಚೇರಿಗೆ ನುಗ್ಗಿ ತಾವೇ ಮೇಜು-ಕುರ್ಚಿ ಎಳೆದುಕೊಂಡು ಕೂತರು.
ಈ ಬೆಳವಣಿಗೆಗಳನ್ನು ಖಂಡಿಸಿರುವ ರಾಜ್ಯ ಹಿಂದುಳಿದ ವರ್ಗ ಜಾಗೃತಿ ವೇದಿಕೆ, ಮುಖ್ಯಮಂತ್ರಿಗಳು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ತಮ್ಮ ಕೋಮಿನ ಜನರ ಹಿತಕಾಯಲು, ನಿಯಮ ಮುರಿದಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ಮತ್ತು ಜನತಾ ನ್ಯಾಯಾಲದಲ್ಲಿ ಹೋರಾಟ ನಡೆಸುತ್ತೇವೆ ಎಂದಿದೆ.
ಘಟನೆಯ ಹಿನ್ನೆಲೆ : ವಿ.ವಿ.ಯ 200ಕ್ಕೂ ಅಧಿಕ ಹಂಗಾಮಿ ನೌಕರರು ಒಂದು ವರ್ಷದಿಂದ ಇಲ್ಲಿ ಧರಣಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಈ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಕುಲಪತಿಗೆ ಸೂಚನೆ ನೀಡಿದ್ದಾರೆ.
ನಿಮಮಗಳನ್ವಯ ಈ ನೌಕರರನ್ನು ಮತ್ತೆ ನೌಕರಿಗೆ ಸೇರಿಸಿಕೊಳ್ಳುವುದು ಅಸಾಧ್ಯ ಎಂಬುದು ಕುಲಪತಿ ಪ್ರೊ.ಕೆ.ಸುಧಾರಾವ್ ವಾದ. ಒಟ್ಟಾರೇ, ಮುಖ್ಯಮಂತ್ರಿಗಳ ಪಾಲಿಗಿದು ಪ್ರತಿಷ್ಠೆಯ ಸಂಗತಿ. ವಿ.ವಿ.ಪಾಲಿಗಿದು ನಿಯಮ ಮತ್ತು ಶಿಸ್ತಿನ ಪ್ರಶ್ನೆ.
(ದಟ್ಸ್ ಕನ್ನಡ ವಾರ್ತೆ)