ಪಬ್ ಮೇಲೆ ಕನ್ನಡ ಸಂಘಟನೆ ದಾಳಿ: ಸರಿಯೋ?ತಪ್ಪೋ?
ಬೆಂಗಳೂರು : ಕನ್ನಡ ಪಬ್ ಸಂಘಟನೆಯಾಂದು ಪಪ್ಗೆ ನುಗ್ಗಿ, ಅಲ್ಲಿ ಮೋಜಿನಲ್ಲಿ ತೇಲಾಡುತ್ತಿದ್ದ ಮೇಲ್ವರ್ಗದ ಯುವಕ-ಯುವತಿಯರ ಹೊರಗಟ್ಟಿದ ಘಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕನ್ನಡ ಸಂಘಟನೆ ಒಳ್ಳೆಯ ಕೆಲಸ ಮಾಡಿದೆ. ದಾರಿ ತಪ್ಪುತ್ತಿರುವ ಯುವ ಸಮುದಾಯಕ್ಕೆ ಕಡಿವಾಣ ಹಾಕಲು ಮತ್ತು ಸಂಸ್ಕೃತಿ ಕಾಯುವ ನಿಟ್ಟಿನಲ್ಲಿ ಇಂತಹ ಕ್ರಮಗಳು ಅನಿವಾರ್ಯ ಎಂಬುದು ಕೆಲವರ ಅಭಿಪ್ರಾಯ.
ಈ ಘಟನೆಯನ್ನು ಖಂಡಿಸಿರುವ ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್.ತಿಮ್ಮಪ್ಪ, ಇದು ಕನ್ನಡ ಬೆಳೆಸುವ ಕ್ರಮವಲ್ಲ. ಇಂತಹ ಬೆಳವಣಿಗೆಗಳಿಂದ ಕನ್ನಡಿಗರಿಗೆ ಅವಮಾನ ಎಂದಿದ್ದಾರೆ.
ಘಟನೆಯ ಹಿನ್ನೆಲೆ : ಏರ್ಪೋರ್ಟ್ ರಸ್ತೆಯ ಲೀಲಾ ಪ್ಯಾಲೇಸ್ಗೆ ನುಗ್ಗಿ, ಅಲ್ಲಿದ್ದವರನ್ನು ಹೊರಗಡೆ ಕಳುಹಿಸಿ, ಕರ್ನಾಟಕ ಯುವ ವೇದಿಕೆ ಗೊಂದಲ ಸೃಷ್ಟಿಸಿತ್ತು. ಅಲ್ಲಿನ ಟೇಬಲ್, ಕಿಟಕಿ ಗಾಜುಗಳು ಪುಡಿಪುಡಿ ಮಾಡಿತ್ತು. ಈ ಸಂದರ್ಭದಲ್ಲಿ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದರು.
ಮಧ್ಯೆ ಪ್ರವೇಶಿಸಿದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ 27 ಕಾರ್ಯಕರ್ತರ ಬಂಧಿಸಿ, ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ಈ ಕಾರ್ಯಕರ್ತರನ್ನು 20ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರದಲ್ಲಿದ್ದಾರೆ.
ನಗರದಲ್ಲಿ ವ್ಯಾಪಿಸುತ್ತಿರುವ ಪಬ್ ಸಂಸ್ಕೃತಿ ಬಗ್ಗೆ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಸಂಸ್ಕೃತಿಗೆ ಕಡಿವಾಣ ಹಾಕುವುದು ನಮ್ಮ ಧ್ಯೇಯ ಎಂದು ಹೇಳಿಕೊಂಡಿದೆ.
(ದಟ್ಸ್ ಕನ್ನಡ ವಾರ್ತೆ)