ರಾಮಚಂದ್ರಾಪುರ ಮಠ ಮತ್ತು ಸರ್ಕಾರದ ವಿರುದ್ಧ ದಾವೆ?
ಬೆಂಗಳೂರು : ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ನಡೆದ ವಿಶ್ವ ಗೋ ಸಮ್ಮೇಳನವನ್ನು ಅನೇಕರು ಟೀಕಿಸುತ್ತಿದ್ದಾರೆ. ಈ ಮಧ್ಯೆ ಸಮ್ಮೇಳನದ ನೆಪದಲ್ಲಿ ಪರಿಸರ ನಾಶ ಮಾಡಲಾಗಿದೆ ಎಂಬ ದೂರು ಕೇಳಿ ಬಂದಿದೆ.
ಸಮ್ಮೇಳನದ ಹೆಸರಲ್ಲಿ ಶರಾವತಿ ದಡದಲ್ಲಿದ್ದ ಗುಡ್ಡಗಳ ನೆಲಸಮ ಮಾಡಲಾಗಿದೆ. ನಾನಾ ಗಿಡಮರಗಳನ್ನು ಕಡಿಯಲಾಗಿದೆ. ಈ ಮೂಲಕ ಪರಿಸರ ನಾಶ ನಡೆದಿದೆ ಎಂದು ದಲಿತ ಸಂಘರ್ಷ ಸಮಿತಿ ದೂರಿದೆ.
ಸಮ್ಮೇಳನದಿಂದಾಗಿ ಶರಾವತಿ ನದಿ ಕೊಳಕಾಗಿದೆ. ಅಪಾರ ಕೊಳಕು, ಬ್ಲೀಚಿಂಗ್ ಪೌಡರ್, ಪಿನಾಯಿಲ್ ಮತ್ತಿತರ ವಿಷ ವಸ್ತುಗಳು ಮಳೆ ನೀರಿನ ಜೊತೆ ನದಿ ಸೇರಿವೆ. ಈ ಪರಿಣಾಮ ಶರಾವತಿ ನೀರು ಕಲುಷಿತಗೊಂಡಿದೆ. ಮೀನುಗಳು ಸೇರಿದಂತೆ ಅಪಾರ ಜಲಚರಗಳು ಸತ್ತಿವೆ. ಸುತ್ತಮುತ್ತಲಿನ ಗ್ರಾಮಸ್ಥರು, ಕೊಳಕು ನೀರನ್ನು ಬಳಸುವಂತಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಹೇಳಿದೆ.
ಮಠ ಮತ್ತು ಸರ್ಕಾರದ ವಿರುದ್ಧ ದಾವೆ? :
ರಾಜಕೀಯ ಮತ್ತು ಧಾರ್ಮಿಕ ಶಕ್ತಿಗಳ ಬೆಂಬಲ ಪಡೆದು, ರಾಮಚಂದ್ರಾಪುರ ಮಠ, ಈ ಭಾಗದಲ್ಲಿ ಪರಿಸರ ನಾಶಕ್ಕೆ ಕಾರಣವಾಗಿದೆ. ಮೇಲು-ಕೀಳುಗಳ ತೊಲಗಿಸಬೇಕಾದ ಮಠ, ಸಮ್ಮೇಳನದ ಸಂದರ್ಭದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿತ್ತು. ಇದು ಇತರೆ ಸಮುದಾಯಕ್ಕೆ ನೋವು ತಂದಿದೆ. ಮಠದಿಂದಾದ ಪರಿಸರ ನಾಶ ಮತ್ತು ಸಮ್ಮೇಳನಕ್ಕೆ ಜನರ ತೆರಿಗೆ ಹಣ ನೀಡಿದ ಸರ್ಕಾರದ ವಿರುದ್ಧ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ದಲಿತ ಸಂಘರ್ಷ ಸಮಿತಿ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)