ಮೇ.4ರಂದು‘ಲಾಟರಿ ಲಕ್ಷ್ಮಿ’ಯರ ಹಣೆಬರಹ ನಿರ್ಧಾರ!
ಬೆಂಗಳೂರು : ‘ಹೋದೆಯಾ ಪಿಶಾಚಿ ಅಂದ್ರೆ, ಬಂದೆ ಗವಾಕ್ಷೀಲಿ’ ಅನ್ನುವಂತೆ ಮತ್ತೆ ಬಂದಿದೆ ಲಾಟರಿ ಭೂತ! ಪೇಪರ್ ಲಾಟರಿಗಳ ಜೊತೆಗೆ ನಿನ್ನೆಯಿಂದ ಆರಂಭಗೊಂಡಿರುವ ಆನ್ಲೈನ್ ಲಾಟರಿಗಳ ಭರಾಟೆ ಮಂಗಳವಾರ ಬಿರುಸಾಗಿದೆ.
ಲಾಟರಿ ನಿರ್ಬಂಧಕ್ಕೆ ರಾಜ್ಯ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವಿಗೆ ಸರ್ಕಾರ ಪ್ರಯತ್ನಿಸುತ್ತಿದೆ. ಇತ್ತ ಅರುಣಾಚಲ ಪ್ರದೇಶ ಸರ್ಕಾರದ ಲಕ್ಕಿ ಜಾಕ್ಪಾಟ್(ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ 7ಡ್ರಾಗಳು) ಆರಂಭಗೊಂಡಿದೆ.
ಬೆಂಗಳೂರು, ಮೈಸೂರು, ಗುಲ್ಬರ್ಗ, ಧಾರವಾಡ ಮತ್ತು ಗದಗ ಜಿಲ್ಲೆಯ 750ಕೇಂದ್ರಗಳಲ್ಲಿ ಲಕ್ಕಿ ಜಾಕ್ಪಾಟ್ ಲಾಟರಿಗೆ ಚಾಲನೆ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.
ಮೇ.4ರ ತನಕ ಕಾದು ನೋಡುವ ನೀತಿ : ತಡೆಯಾಜ್ಞೆ ತೆರವುಗೊಳಿಸಲು ಸರ್ಕಾರ ನೀಡಿರುವ ಅರ್ಜಿ, ಮೇ. 4ರಂದು ವಿಚಾರಣೆಗೆ ಬರಲಿದೆ. ಹೈಕೋರ್ಟ್ ಧೋರಣೆ ಅನುಸರಿಸಿ, ಪ್ಲೇವಿನ್ ಮತ್ತು ಬೆಸ್ಟ್ವಿನ್ ಲಾಟರಿಗಳು ಪುನರ್ ಆರಂಭವನ್ನು ನಿರ್ಧರಿಸಲಿವೆ.
ರಾಜ್ಯದ ಲಾಟರಿ ಸಚಿವರಂತೂ ಲಾಟರಿ ತೊಲಗಿಸಲು ಕೈಮೀರಿ ಶ್ರಮಿಸುವುದಾಗಿ ಹೇಳಿದ್ದಾರೆ. ಲಾಟರಿ ಜೊತೆಗೆ ಕುದುರೆ ರೇಸನ್ನು ಸಹಾ ನಿಷೇಧಿಸುವುದಾಗಿ ಪ್ರಕಟಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)