3 ವರ್ಷದೊಳಗೆ ಶೇ.50 ಬೋರ್ವೆಲ್ ಬತ್ತಲಿವೆಯೇ...?
ಬೆಂಗಳೂರು : ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ 2010ನೇ ಸಾಲಿನ ವೇಳೆಗೆ, ದಕ್ಷಿಣ ಭಾರತದ ಶೇಕಡಾ 50ರಷ್ಟು ಕೊಳವೆಬಾವಿಗಳು ಬತ್ತಿಹೋಗಲಿವೆ ಎಂದು ಅಧ್ಯಯನವೊಂದು ಹೇಳಿದೆ.
ಇಂಡೋ-ಫ್ರೆಂಚ್ ಅಂತರ್ಜಲ ಸಂಶೋಧನಾ ಕೇಂದ್ರ ಹಾಗೂ ಎನ್ಜಿಆರ್ಐ(ನ್ಯಾಷನಲ್ ಜಿಯೋಫಿಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್), ಹೈದರಾಬಾದ್ ನಡೆಸಿದ ಅಧ್ಯಯನ ಈ ಅಭಿಪ್ರಾಯಕ್ಕೆ ಬಂದಿದೆ.
ದಕ್ಷಿಣ ಭಾರತದ ಅನೇಕ ಸ್ಥಳಗಳಲ್ಲಿ ಈ ಕುರಿತು ಅಧ್ಯಯನ ನಡೆಸಲಾಗಿತ್ತು. ಅಧ್ಯಯನ ಕುರಿತ ಲೇಖನ ‘ಪ್ರಚಲಿತ ವಿಜ್ಞಾನ’(ಕರಂಟ್ ಸೈನ್ಸ್) ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಬೆಳೆಪದ್ಧತಿ ಹಾಗೂ ಅಂತರ್ಜಲ ಕಾಯ್ದುಕೊಳ್ಳುವ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳದೆ, ಕೃಷಿ ಅಭಿವೃದ್ಧಿ ಮುಂದುವರಿದರೆ 2010ರ ವೇಳೆಗೆ ಶೇಕಡಾ 50ರಷ್ಟು ಕೊಳವೆಬಾವಿಗಳು ಬತ್ತಿಹೋಗಲಿವೆ ಎಂದು ಅಧ್ಯಯನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಬೆಳೆ ಪ್ರದೇಶ ಕಡಿತಗೊಳಿಸುವುದು, ಬೆಳೆ ವಿಧಾನ ಬದಲಿಸಿಕೊಳ್ಳುವುದು ಹಾಗೂ ಕೃತಕ ಪುನರ್ಬಲನ ವಿಧಾನಗಳನ್ನು ಅನುಸರಿಸುವ ಸಲಹೆ ನೀಡುವ ಮೂಲಕ, ಅಧ್ಯಯನ ಪರಿಹಾರೋಪಾಯಗಳನ್ನೂ ಸೂಚಿಸಿದೆ.
(ಏಜನ್ಸೀಸ್)