ಸಾಲುಮರದ ತಿಮ್ಮಕ್ಕ ಬೀದಿಗೆ ಬೀಳೋ ಸ್ಥಿತಿ ಬಾರದಿರಲಿ!
ಹಾಸನ : ಪರಿಸರ ಪ್ರೇಮದಿಂದ ಎಲ್ಲೆಡೆ ಗಮನ ಸೆಳೆದ ಸಾಲುಮರದ ತಿಮ್ಮಕ್ಕ, ಬೀದಿಯಲ್ಲಿ ನಿಲ್ಲುವ ಸ್ಥಿತಿ ಬಂದಿದೆ. ಸರ್ಕಾರ ಇತ್ತ ಗಮನಹರಿಸಿ, ಸಮಸ್ಯೆ ನೀಗಿಸಬೇಕಾಗಿದೆ.
ಬೇಲೂರಿನಲ್ಲಿ ವೀರಾಂಜನೇಯ ಸೇವಾ ಸಮಿತಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಕಷ್ಟ ಸುಖಗಳನ್ನು ಜನರ ಮುಂದಿಟ್ಟರು.
ಚಿತ್ರದುರ್ಗ ಜಿಲ್ಲೆಯ ನನ್ನೂರಿನಲ್ಲಿ ಸರ್ಕಾರ ನನಗೊಂದು 75ಸಾವಿರ ರೂ. ಮೌಲ್ಯದ ಮನೆ ನಿರ್ಮಿಸಿಕೊಟ್ಟಿದೆ. ಆ ಮನೆಗೆ ನಾನು ಸಿಮೆಂಟ್ ಮತ್ತು ಇನ್ನಿತರ ವಸ್ತುಗಳನ್ನು ನೀಡಿದ್ದೇನೆ. ಆದರೆ ಆ ಮನೆಯನ್ನು ನನ್ನ ಹೆಸರಿಗೆ ಸರ್ಕಾರ ರಿಜಿಸ್ಟರ್ ಮಾಡಿಸಿಲ್ಲ. ಹೀಗಾಗಿ ಮನೆಕಟ್ಟಿದ ಕಂಡ್ರಾಕ್ಟರ್, ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾನೆ. ಒಂದೊಂದು ಸಲ ಬೆದರಿಕೆ ಹಾಕುತ್ತಿದ್ದಾನೆ. ಈ ವಯಸ್ಸಿನಲ್ಲಿ ಬೀದಿಯಲ್ಲಿ ನಿಲ್ಲಬೇಕಾದ ಸ್ಥಿತಿ ಬಂದೊದಗಿದೆ ಎಂದು ತಿಮ್ಮಕ್ಕ ಹೇಳಿದರು.
ನಂತರ ತಮ್ಮ ಹಸಿರು ಪ್ರೀತಿ ಬಗ್ಗೆ ಮಾತನಾಡಿದರು. ಮದುವೆಯಾಗಿ 25ವರ್ಷವಾದರೂ ನಮಗೆ ಮಕ್ಕಳಾಗಲಿಲ್ಲ. ಮರ ಬೆಳೆಸುವ ಕಾಯಕ ಶುರುಮಾಡಿದೆವು. ಅವುಗಳನ್ನೇ ನಮ್ಮ ಮಕ್ಕಳಂತೆ ಬೆಳೆಸಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)