ಘೋಷಣೆಗಳ ಮಧ್ಯೆ, ಸೊರಗುತ್ತಿರುವ ಕಾವೇರಿ ಚಳವಳಿ!Monday, April 23 2007 10:30 Hrs (IST)
ಮೈಸೂರು : ಕಾವೇರಿ ಹಿತರಕ್ಷಣಾ ಸಮಿತಿ ಚಳವಳಿ ಸೋಮವಾರ 78ನೇ ದಿನ ತಲುಪಿದೆ. ಕೇಂದ್ರದಿಂದ ಅರ್ಧ ಕಾಸಿನಷ್ಟು ಪ್ರತಿಸ್ಪಂದನ ಸಹಾ ವ್ಯಕ್ತವಾಗಿಲ್ಲ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಟ್ಟರೇ, ಉಳಿದೆಡೆ ಕಾವೇರಿ ಚಳವಳಿ ಕಾವು ಇಳಿಯುತ್ತಿದೆ. ಸಮರ್ಥ ನಾಯಕತ್ವದ ಕೊರತೆಯಿಂದ ಚಳವಳಿ ಗಟ್ಟಿಯಾಗುತ್ತಿಲ್ಲ. ‘ಹಾಗೆ ಮಾಡುತ್ತೇವೆ.. ಹೀಗೆ ಮಾಡುತ್ತೇವೆ’ ಎನ್ನುವ ನಾಯಕರುಗಳು, ರಂಗಕ್ಕಿಳಿಯಲು ಹಿಂದೆಮುಂದೆ ನೋಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಈ ಮಧ್ಯೆ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಮೇ 1ರಿಂದ ಮಂಡ್ಯ ಜಿಲ್ಲೆಯಲ್ಲಿನ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಸಮತಿ ಘೇರಾವ್ ಹಾಕಲಿದೆ ಎಂದು ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಹೇಳಿದ್ದಾರೆ. ಸುದ್ದಿಗಾರರ ಜೊತೆ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರಿ ಕಚೇರಿಗಳು ಹಾಗೂ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಬೀಗ ಜಡಿಯಲಾಗುವುದು. ಇದಲ್ಲದೆ ಬಸ್ ಮತ್ತು ರೈಲು ತಡೆಯೂ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಗಂಭೀರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಘೇರಾವ್ ನಡೆಯಲಿದೆ ಎಂದು ಅವರು ತಿಳಿಸಿದರು.
ಮಂಡ್ಯ, ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ ಮೊದಲಾದೆಡೆ ಕಾವೇರಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ರೈತರು ಧರಣಿ ನಡೆಸಿದರು.
ಇನ್ನೊಂದೆಡೆ ಕಾವೇರಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಗರದ ಕೆ.ಆರ್.ವೃತ್ತದಲ್ಲ್ಲಿ ತೀರ್ಪು ವಿರೋಧಿಸಿ ಸಹಿ ಆಂದೋಲನ ಮುಂದುವರಿದಿದೆ.
(ಯುಎನ್ಐ)