ಬೈಗಳುಗಳಿಂದ ನೊಂದ ಮಹಿಳೆ ಆತ್ಮಹತ್ಯೆಗೆ ಶರಣು
ಬೆಂಗಳೂರು : ನೆರೆಹೊರೆಯವರ ಬೈಗಳುಗಳಿಂದ ನೊಂದ ಮಹಿಳೆಯೋರ್ವಳು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪುಷ್ಪಾ(30) ಎಂಬಾಕೆ ಮೃತ ನತದೃಷ್ಟ ಮಹಿಳೆ. ಮಂಜುನಾಥನಗರದಲ್ಲಿ ಪುಷ್ಪಾ ದಂಪತಿಗಳು ದಿನಸಿ ಅಂಗಡಿ ನಡೆಸುತ್ತಿದ್ದು, ಅಂಗಡಿಯಲ್ಲಿ ಒಂದು ರೂಪಾಯಿ ನಾಣ್ಯದ ದೂರವಾಣಿ ಪೆಟ್ಟಿಗೆ ಇಡಲಾಗಿದೆ. ಅದೇ ಪ್ರದೇಶದಲ್ಲಿ ವಾಸಿಸುತ್ತಿರುವ ಕಲ್ಪನಾ ಎಂಬ ಹುಡುಗಿ ಈ ದೂರವಾಣಿ ಮೂಲಕ ತನ್ನ ಪ್ರಿಯತಮನೊಂದಿಗೆ ಮಾತಾಡುತ್ತಿದ್ದಳು ಎನ್ನಲಾಗಿದೆ.
ಈ ಮಧ್ಯೆ ಕಲ್ಪನಾ ಮನೆಯಲ್ಲಿನ ಚಿನ್ನ ಮತ್ತು ವಜ್ರದ ಒಡವೆಗಳನ್ನು ಎತ್ತಿಕೊಂಡು ತನ್ನ ಪ್ರಿಯತಮನೊಂದಿಗೆ ಓಡಿಹೋಗಿದ್ದಾಳೆ. ಆನಂತರ ಕಲ್ಪನಾಳ ತಂದೆ ಷಣ್ಮುಗಂ, ತಾಯಿ ಕುಪ್ಪಮ್ಮ ಇಬ್ಬರೂ ಸೇರಿಕೊಂಡು, ನಮ್ಮ ಮಗಳು ತನ್ನ ಪ್ರಿಯತಮನಿಗೆ ಕರೆಮಾಡುತ್ತಿದ್ದುದನ್ನು ನಮಗೇಕೆ ಹೇಳಲಿಲ್ಲ ಎಂದು ಪುಷ್ಪಾಳನ್ನು ಬಾಯಿಗೆ ಬಂದಂತೆ ಸಾರ್ವಜನಿಕವಾಗಿ ಬೈಯ್ದಿದ್ದಾರೆ.
ಇದರಿಂದ ನೊಂದ ಪುಷ್ಪಾ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಮೃತ ಪುಷ್ಪಾಳ ಪತಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರುಸಲ್ಲಿಸಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)