ರಾಷ್ಟ್ರಗೀತೆ ವಿವಾದ : ಕ್ಷಮೆ ಕೋರಿದ ನಾರಾಯಣಮೂರ್ತಿ
ಬೆಂಗಳೂರು : ರಾಷ್ಟ್ರಗೀತೆ ಮತ್ತು ಕಾವೇರಿ ಚಳವಳಿಗೆ ಸಂಬಂಧಿಸಿದಂತೆ ಇನ್ಫೋಸಿಸ್ ನಾರಾಯಣಮೂರ್ತಿ ನೀಡಿದ್ದ ಎರಡು ಹೇಳಿಕೆಗಳು, ತೀವ್ರ ಟೀಕೆಗೆ ಗುರಿಯಾಗಿವೆ.
ಈ ಮಧ್ಯೆ ನಾರಾಯಣಮೂರ್ತಿ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದು, ಕ್ಷಮೆ ಯಾಚಿಸಿದ್ದಾರೆ. ರಾಷ್ಟ್ರದ ಘನತೆಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿಯುವ ಹಂಬಲ ಹೊಂದಿರುವ ನಾವು, ರಾಷ್ಟ್ರಗೀತೆಗೆ ಅವಮಾನವೆಸಗುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಮಧ್ಯೆ ವಿಧಾನಮಂಡಲದ ಎರಡೂ ಸದನಗಳಲ್ಲೂ ನಾರಾಯಣಮೂರ್ತಿ ಹೇಳಿಕೆಯನ್ನು ಸದಸ್ಯರು ಖಂಡಿಸಿದರು. ಇಂತಹ ಹೇಳಿಕೆ ನೀಡುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು ಎಂದು ವಾಟಾಳ್ ನಾಗರಾಜ್, ಮಾಧುಸ್ವಾಮಿ ಮತ್ತಿತರರು ಒತ್ತಾಯಿಸಿದರು. ಕಾವೇರಿ ಚಳವಳಿ ಟೀಕಿಸಿದ ನಾರಾಯಣಮೂರ್ತಿ ಹೇಳಿಕೆ ಬಗ್ಗೆ ಪ್ರತಿಪಕ್ಷದ ಮುಖಂಡ ಎನ್.ಧರ್ಮಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.
ನಾರಾಯಣಮೂರ್ತಿ ಹೇಳಿಕೆಗಳ ವಿವರ ಪಡೆದು, ಮುಂದಿನ ಕ್ರಮ ಜರುಗಿಸುವುದಾಗಿ ಗೃಹ ಸಚಿವ ಎಂ.ಪಿ.ಪ್ರಕಾಶ್ ಸದನಕ್ಕೆ ಭರವಸೆ ನೀಡಿದರು.
ಇತ್ತ ಕನ್ನಡ ಪರ ಸಂಘಟನೆಗಳು ನಾರಾಯಣಮೂರ್ತಿ ಹೇಳಿಕೆಯಿಂದ ಕೆರಳಿದ್ದು, ಪ್ರತಿಭಟನೆಗೆ ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇನ್ಫೋಸಿಸ್ಗೆ ರಕ್ಷಣೆ ಒದಗಿಸಿದ್ದಾರೆ.
ಏನಿದು ವಿವಾದ? : ರಾಷ್ಟ್ರಪತಿ ಅಬ್ದುಲ್ ಕಲಾಂ ಇತ್ತೀಚೆಗೆ ಮೈಸೂರಿನ ಇನ್ಫೋಸಿಸ್ ಸಂಸ್ಥೆಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ, ವಾದ್ಯಗಳ ಮೂಲಕ ರಾಷ್ಟ್ರಗೀತೆ ನುಡಿಸಲಾಗಿತ್ತು.
ಈ ಘಟನೆಯನ್ನು ಸಮರ್ಥಿಸಿಕೊಂಡಿದ್ದ ನಾರಾಯಣಮೂರ್ತಿ, ಸಂಸ್ಥೆಯಲ್ಲಿ ವಿದೇಶಿಯರೂ ಇದ್ದಾರೆ. ಹೀಗಾಗಿ ಮುಜುಗರ ತಪ್ಪಿಸಲು ವಾದ್ಯ ಸಂಗೀತ ಹಾಡಲಾಯಿತು ಎಂದಿದ್ದರು.
ನಾರಾಯಣಮೂರ್ತಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಿಲ್ಲ ಎಂಬುದು ಕನ್ನಡ ಸಂಘಟನೆಗಳು ದೂರು.
(ದಟ್ಸ್ ಕನ್ನಡ ವಾರ್ತೆ)