ಶಾಸಕ ರೇಣುಕಾಚಾರ್ಯರಿಂದ ಮಹಿಳೆಗೆ ಬ್ಲ್ಯಾಕ್ಮೇಲ್?
ದಾವಣಗೆರೆ : ವಿಧಾನಸಭಾ ಸದಸ್ಯ ಎಂ.ಪಿ.ರೇಣುಕಾಚಾರ್ಯ ತಮ್ಮನ್ನು ಮದುವೆಯಾಗುವಂತೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ, ಎಂದು ಬೆಂಗಳೂರು ಮೂಲದ ಶಿಕ್ಷಣ ಸಂಸ್ಥೆಯಾಂದರ ಕಾರ್ಯದರ್ಶಿ ಬಿ.ಆರ್.ಜಯಲಕ್ಷ್ಮೀ ಎಂಬುವರು ಆರೋಪಿಸಿದ್ದಾರೆ.
ಜಯಲಕ್ಷ್ಮೀ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನನ್ನನ್ನು ಮದುವೆಯಾಗು ಎಂದು ಶಾಸಕರು ಒತ್ತಾಯಿಸುತ್ತಿದ್ದರು. ನಾನು ನಿರಾಕರಿಸಿದಾಗ ನನ್ನ ಮೇಲೆ ಆ್ಯಸಿಡ್ ಎರಚುವುದಾಗಿ ಬೆದರಿಕೆಯಾಡ್ಡಿದರು ಎಂದು ಹೇಳಿದರು.
ನಾನು 1998ರಲ್ಲಿ ಹೊನ್ನಾಳಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿದ್ದೆ. ನನಗೆ ಶಾಸಕರ ಪತ್ನಿಯ ಮೂಲಕ ಶಾಸಕರ ಪರಿಚಯವಾಗಿತ್ತು. ಈ ನಡುವೆ ನಾವು ಬೆಂಗಳೂರಿನಲ್ಲಿ ಗ್ರೀನ್ ಸಿಟಿ ಚಾರಿಟೆಬಲ್ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದೆವು. ಶಾಸಕರು ಇತ್ತೀಚೆಗೆ ನಮ್ಮ ಬೆಂಗಳೂರಿನ ಮನೆಗೆ ಪದೇ ಪದೇ ಬಂದು, ಮದುವೆಯಾಗುವಂತೆ ಹಾಗೂ ಶಿಕ್ಷಣ ಸಂಸ್ಥೆಯಲ್ಲಿ ಪಾಲುದಾರನನ್ನಾಗಿ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿದರು.
ರೇಣುಕಾಚಾರ್ಯ ಪ್ರತಿಕ್ರಿಯೆ : ಜಯಲಕ್ಷ್ಮೀ ಪರಿಚಯವಿರುವುದು ನಿಜ. ಮದುವೆಯಾಗುವಂತೆ ಪೀಡಿಸಿದ್ದು ಆಕೆಯೇ ಹೊರತು ನಾನಲ್ಲ. ವಿನಾಕಾರಣ ಆರೋಪ ಹೊರಿಸಿರುವ ಆಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ.
ರೇಣುಕಾಚಾರ್ಯ ಪ್ರಸ್ತುತ ಕಿಯೋನಿಕ್ಸ್ ಅಧ್ಯಕ್ಷರಾಗಿದ್ದು, ಹೊನ್ನಾಳಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
(ಏಜನ್ಸೀಸ್)