‘ಲಾಲ್ಬಾಗ್ಗೆ ಪ್ಲಾಸ್ಟಿಕ್ ತಂದರೆ ನಾವು ಸುಮ್ಮನಿರಲ್ಲ ..’
ಬೆಂಗಳೂರು : ಬೇಸಿಗೆ ಬಿಸಿಲಿನ ಧಗೆಯಲ್ಲಿ ತಂಪು ಪಡೆಯಲು ಲಾಲ್ಬಾಗ್ಗೆ ಹೋಗುವ ಮುಂಚೆ, ಪ್ಲಾಸ್ಟಿಕ್ ಚೀಲಗಳನ್ನು ಕೊಂಡೊಯ್ಯುವುದನ್ನು ತಪ್ಪಿಸಿ, ಪರಿಸರಸ್ನೇಹಿಗಳಾಗಿ.
ಮೇಲಿನ ಉಪದೇಶ ಮರೆತು, ನೀವು ಎಂದಿನಂತೆ ಪ್ಲಾಸ್ಟಿಕ್ ಚೀಲಗಳೊಂದಿಗೆ ಲಾಲ್ಬಾಗ್ಗೆ ನುಗ್ಗಿದರೆ, ಇನ್ಮುಂದೆ ಮುಜುಗರಕ್ಕೆ ಸಿಲುಕುವಿರಿ! ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಲಾಲ್ಬಾಗನ್ನು ಪ್ಲಾಸ್ಟಿಕ್ ಮುಕ್ತ ತೋಟವನ್ನಾಗಿ ಮಾಡುವ ಸಂಕಲ್ಪ ವನ್ನು ನಗರದ ಶಾಲಾ ಮಕ್ಕಳು ತೊಟ್ಟಿದ್ದಾರೆ.
ಲಾಲ್ಬಾಗ್ನ ಪ್ರವೇಶ ದ್ವಾರಗಳಲ್ಲಿ ಗಸ್ತು ತಿರುಗುವ ಶಾಲಾ ಮಕ್ಕಳು, ಸಾರ್ವಜನಿಕರ ಬ್ಯಾಗ್ಗಳನ್ನು ಪರಿಶೀಲಿಸಿ ಒಳಬಿಡಲಿದ್ದಾರೆ. ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಮಕ್ಕಳು, ಬೀದಿ ನಾಟಕಗಳು, ನೃತ್ಯ-ಗೀತೆಗಳ ಪ್ರದರ್ಶನಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮಕ್ಕಳು ಉತ್ಸುಕರಾಗಿದ್ದಾರೆ.
ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ತೋಟಗಾರಿಕಾ ಇಲಾಖೆ ಸಹಕಾರ ಈ ಮಕ್ಕಳಿಗೆ ಲಭಿಸಿದೆ.
ಇದು ಸಸ್ಯಕಾಶಿ, ಕೈಮುಗಿದು ಒಳಗೆ ಬನ್ನಿ...
ಸುಮಾರು 240 ಎಕರೆ ವಿಸ್ತ್ರೀರ್ಣದ ಲಾಲ್ಬಾಗ್ ಸಸ್ಯಕಾಶಿ ಚೆಲುವು ಹೆಚ್ಚಿಸಲು ಸರ್ಕಾರ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ನೂರಾರು ಎಕರೆಯ ಈ ತೋಟ ಕಾಯಲಿಕ್ಕೆ ಇರುವುದು ಬರೀ 20 ಜನ ಕಾವಲುಗಾರರು ಮಾತ್ರ. ಲಾಲ್ಬಾಗ್ ಸ್ವಚ್ಛಗೊಳಿಸಲು ಇರುವುದು ಕೇವಲ 60 ಮಂದಿ ಸಿಬ್ಬಂದಿ ಮಾತ್ರ.
ದಿನವೊಂದಕ್ಕೆ 3,000 ದಿಂದ 4,000 ಜನ ಲಾಲ್ ಬಾಗ್ಗೆ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ 8 ಸಾವಿರ ದಾಟುತ್ತದೆ. ಪ್ರತಿದಿನ 5,000ಕ್ಕೂ ಅಧಿಕ ನಡಿಗೆದಾರರು ಲಾಲ್ಬಾಗ್ಗೆ ಬರುತ್ತಾರೆ.
ಸಾರ್ವಜನಿಕರು ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿದರೆ ಅನುಕೂಲ. ಇಲ್ಲದಿದ್ದರೆ ಏಪ್ರಿಲ್ 15ರಿಂದ ಪರಿಸರ ಹಾಳು ಮಾಡುವ ನಾಗರಿಕರಿಗೆ 50 ರೂ. ನಿಂದ 500 ರೂ ವರೆಗೂ ದಂಡ ವಿಧಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಜಿ. ಎಸ್. ವಸಂತ್ ಕುಮಾರ್ ಎಚ್ಚರಿಸಿದ್ದಾರೆ.
(ದಟ್ಸ್ ಕನ್ನಡವಾರ್ತೆ)