ಗಡುವು ಮೀರಿದರೆ ಡಿಕೆಶಿ ವಿರುದ್ಧ ಕ್ರಮ : ಲೋಕಾಯುಕ್ತ
ಬೆಂಗಳೂರು : ನಿಮ್ಮ ಆಸ್ತಿ ವಿವರ ನೀಡಿ ಅಥವಾ ಕ್ರಿಮಿನಲ್ ಮೊಕದ್ದಮೆ ಎದುರಿಸಿ ಎಂದು ಲೋಕಾಯುಕ್ತ ಎನ್. ಸಂತೋಷ್ ಹೆಗಡೆ, ಶಾಸಕರಿಗೆ ಆಯ್ಕೆಗಳನ್ನು ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಎಲ್ಲಾ ಶಾಸಕರು ತಮ್ಮ ಆಸ್ತಿ ವಿವರಗಳನ್ನು ನೀಡಬೇಕೆಂದು ಈ ಹಿಂದೆ ಕೋರಿದ್ದೆವು. ನಿಗದಿಯಾದ ದಿನಾಂಕದಂದು ಡಿ.ಕೆ.ಶಿವಕುಮಾರ್ ಸೇರಿದಂತೆ ಆರು ಶಾಸಕರು ಆಸ್ತಿ ವಿವರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಮನವಿಯನ್ವಯ ಎರಡು ದಿನಗಳ ಕಾಲಾವಕಾಶ ನೀಡಿದ್ದೇನೆ. ಗುರುವಾರ ಮಧ್ಯಾಹ್ನ 3.30ರೊಳಗೆ ಮಾಹಿತಿ ನೀಡದಿದ್ದರೆ, ಕ್ರಿಮಿನಲ್ ಮೊಕದ್ದಮೆಯನ್ನು ಹೂಡುತ್ತೇವೆ. ಐಪಿಸಿ ಸೆಕ್ಷನ್ 170ರ ಪ್ರಕಾರ ಲೋಕಾಯುಕ್ತಕ್ಕೆ ಈ ಅಧಿಕಾರ ಇದೆ ಎಂದು ಹೇಳಿದರು.
ಆಸ್ತಿ ವಿವರ ನೀಡದವರ ಪಟ್ಟಿಯಲ್ಲಿ ಡಿ.ಕೆ.ಶಿವಕುಮಾರ್, ಮಹದೇವ, ಮುನಿಯಪ್ಪ ಮುದ್ದಣ್ಣ ಬಿ., ಶಿವಶಂಕರಪ್ಪ ಟಿ.ಹೆಚ್., ಸುಧಾಕರ್.ಡಿ. ಮತ್ತು ವೆಂಕಟೇಶ್. ಕೆ. ಅವರುಗಳು ಇದ್ದಾರೆ. ನಮಗೆ ತಪ್ಪು ಮಾಹಿತಿ ನೀಡಿದ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೀಶ್ವರ್ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಸಂತೋಷ್ ಕುಮಾರ್ ಹೆಗಡೆ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)